ADVERTISEMENT

ಉ.ಪ್ರದೇಶ:ಕೊರೊನಾದಿಂದ ರಕ್ಷಣೆಗೆ ಗೋಮೂತ್ರ ಸೇವಿಸಿದ ಬಿಜೆಪಿ ಶಾಸಕ, ಜನರಿಗೂ ಕರೆ

ಏಜೆನ್ಸೀಸ್
Published 9 ಮೇ 2021, 5:31 IST
Last Updated 9 ಮೇ 2021, 5:31 IST
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್ ಶಾಟ್
ಚಿತ್ರ ಕೃಪೆ: ಟ್ವಿಟರ್ ಸ್ಕ್ರೀನ್ ಶಾಟ್   

ಬಲಿಯಾ (ಉ.ಪ್ರದೇಶ): ಗೋಮೂತ್ರವನ್ನು ಕುಡಿಯುವುದರಿಂದ ಕೋವಿಡ್-19 ರೋಗದಿಂದ ರಕ್ಷಣೆ ಪಡೆಯಬಹುದು ಎಂದು ಹೇಳಿರುವ ಉತ್ತರ ಪ್ರದೇಶದ ಬಿಜೆಪಿ ಶಾಸಕರೊಬ್ಬರು, ಸ್ವತಃ ಗೋಮೂತ್ರ ಸೇವಿಸುವ ವಿಡಿಯೊವನ್ನು ಹಂಚುವ ಮೂಲಕ ಸುದ್ದಿ ಗಿಟ್ಟಿಸಿಕೊಂಡಿದ್ದಾರೆ.

ಬಲಿಯಾ ಜಿಲ್ಲೆಯ ಬೈರಿಯಾ ಮೂಲದ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಎಂಬವರೇ ಗೋಮೂತ್ರ ಸೇವಿಸಿದ್ದು, ಜನರಿಗೂ ಕೊರೊನಾದಿಂದ ರಕ್ಷಣೆ ಪಡೆಯಲು ಗೋಮೂತ್ರ ಕುಡಿಯುವಂತೆ ಮನವಿ ಮಾಡಿದ್ದಾರೆ.

ಗೋಮೂತ್ರವನ್ನು ಹೇಗೆ ಕುಡಿಯಬೇಕು ಎಂಬುದನ್ನು ಸಿಂಗ್ ವಿಡಿಯೊ ಸಮೇತ ತೋರಿಸಿದ್ದು, ಒಂದು ಲೋಟ ನೀರಿನೊಂದಿಗೆ ಬೆರೆಸಿ ಕುಡಿಯಬೇಕು ಎಂದು ಶಿಫಾರಸು ಮಾಡಿದ್ದಾರೆ.

ADVERTISEMENT

ದಿನ 18 ತಾಸು ಕೆಲಸ ಮಾಡುತ್ತಿದ್ದರೂ ಪ್ರತಿದಿನ ಗೋಮೂತ್ರ ಕುಡಿಯುವುದರಿಂದ ನಾನು ಆರೋಗ್ಯವಂತನಾಗಿದ್ದೇನೆ. ಜನರು ಇದನ್ನು ತಮ್ಮ ದಿನಚರಿಯಲ್ಲಿ ಅನುಸರಿಸುವಂತೆ ಮನವಿ ಮಾಡುತ್ತೇನೆ. ಎರಡು-ಮೂರು ಮುಚ್ಚಳದಷ್ಟು ಗೋಮೂತ್ರ ಒಂದು ಲೋಟ ನೀರಿನಲ್ಲಿ ಬೆರೆಸಿ ಸೇವಿಸಬೇಕು. ಅದಾದ ಬಳಿಕ ಅರ್ಧ ಗಂಟೆ ಬೇರೆ ಏನನ್ನೂ ಸೇವಿಸಬಾರದು ಎಂದು ಸಲಹೆ ಮಾಡಿದ್ದಾರೆ.

ವಿಜ್ಞಾನವು ಇದನ್ನು ನಂಬುತ್ತಿದೆಯೇ ಇಲ್ಲವೋ ಗೊತ್ತಿಲ್ಲ. ಆದರೆ ತಾನು ಮಾತ್ರ ಗೋಮೂತ್ರದಲ್ಲಿ ಸಂಪೂರ್ಣ ನಂಬಿಕೆಯನ್ನಿರಿಸಿದ್ದೇನೆ. ಕೋವಿಡ್-19 ಮಾತ್ರವಲ್ಲದೆ ಗೋ ಮೂತ್ರವು ಇತರೆ ಅನೇಕ ರೋಗಗಳ ವಿರುದ್ಧ ವಿಶೇಷವಾಗಿಯೂ ಹೃದಯ ಸಂಬಂಧ ಕಾಯಿಲೆಯ ವಿರುದ್ಧ 'ಸೂಪರ್ ಪವರ್' ಆಗಿದೆ ಎಂದು ವಾದ ಮಂಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.