ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ ಹಾಗೂ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅವರು ಸೋಮವಾರದಿಂದ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಕೋವಿಡ್-19 ಉಚಿತ ಲಸಿಕೆ ಶಿಬಿರಗಳನ್ನು ಪ್ರಾರಂಭಿಸಲಿದ್ದಾರೆ.
ಗೌತಮ್ ಗಂಭೀರ್ ಫೌಂಡೇಷನ್ ಮಾಹಿತಿ ಪ್ರಕಾರ, ಖಾಸಗಿ ಆಸ್ಪತ್ರೆಗಳ ಸಹಯೋಗದಲ್ಲಿ ಕ್ಯಾಂಪ್ಗಳನ್ನು ಆಯೋಜಿಸಲಾಗುವುದು. ಅದರಿಂದಲೇ ಎಲ್ಲ ಖರ್ಚುಗಳನ್ನು ಭರಿಸಲಾಗುವುದು ಎಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಗೌತಮ್ ಗಂಭೀರ್, ನಾವು ಸೋಮವಾರದಿಂದ ಕೋವಿಡ್ ಉಚಿತ ವ್ಯಾಕ್ಸಿನೇಷನ್ ಶಿಬಿರಗಳನ್ನು ಹಮ್ಮಿಕೊಂಡಿದ್ದೇವೆ. ದೆಹಲಿಯ ಜನತೆಗೆ ಸಂಪೂರ್ಣವಾಗಿ ಲಸಿಕೆ ಲಭ್ಯವಾಗುವ ವರೆಗೂ ನಾವು ಈ ಶಿಬಿರಗಳನ್ನು ಮುಂದುವರಿಸುತ್ತೇವೆ. ನಮ್ಮ ಸಹಾಯಾರ್ಥ ಸಂಸ್ಥೆಯು ಈ ಹಿಂದೆಯೂ ಜನರಿಗೆ ನೆರವಾಗಿದ್ದು, ದೆಹಲಿ ಜನತೆಯ ಪ್ರಾಣ ಉಳಿಸುವ ವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಸ್ಲಮ್ ಕ್ಲಸ್ಟರ್ಗಳಲ್ಲೂ ಶಿಬಿರಗಳನ್ನು ಪ್ರಾರಂಭಿಸಲಾಗುವುದು ಎಂದು ಗಂಭೀರ್ ತಿಳಿಸಿದ್ದಾರೆ.
ನಾವು ವ್ಯಾಕ್ಸಿನೇಷನ್ ಶಿಬಿರಗಳನ್ನು ವಿಸ್ತರಿಸಲಿದ್ದೇವೆ. ಅದನ್ನು ಕ್ಲಸ್ಟರ್ಗಳಿಗೂ ಒಯ್ಯಲಿದ್ದೇವೆ. ಮೊಬೈಲ್ ವ್ಯಾಕ್ಸಿನೇಷನ್ ವ್ಯಾನ್ ಮೂಲಕ ಕ್ಲಸ್ಟರ್ನಲ್ಲಿ ಜನರಿಗೆ ಲಸಿಕೆ ಹಾಕಿಸಲಿದ್ದೇವೆ. ಪ್ರತಿ ಭಾನುವಾರವೂ ಈ ಸೌಲಭ್ಯ ದೊರಕಲಿವೆ. ಅಗತ್ಯವಿದ್ದರೆ ಸೇವೆಯನ್ನು ಮತ್ತಷ್ಟು ಹೆಚ್ಚಿಸಲಿದ್ದೇವೆ ಎಂದಿದ್ದಾರೆ.
ಸದ್ಯ 45 ವರ್ಷ ಮೇಲ್ಪಟ್ಟವರಿಗೆ ಶಿಬಿರವನ್ನು ಆಯೋಜಿಸಲಾಗುತ್ತಿದ್ದು,ಮುಂದಿನ ದಿನಗಳಲ್ಲಿ18-44 ವರ್ಷ ವಯೋಮಾನದ ಜನರಿಗೂ ಲಸಿಕೆ ಹಾಕಿಸಿಕೊಳ್ಳಲಾಗುವುದು ಎಂದು ಗಂಭೀರ್ ವಿವರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.