ADVERTISEMENT

ಪರಿಸ್ಥಿತಿ ಸುಧಾರಿಸದೇ ಶಾಲೆಗಳು ಆರಂಭವಾಗದು: ಕೇಜ್ರಿವಾಲ್

ಪಿಟಿಐ
Published 15 ಆಗಸ್ಟ್ 2020, 9:10 IST
Last Updated 15 ಆಗಸ್ಟ್ 2020, 9:10 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ : ಕೋವಿಡ್-19ನಿಂದ ಉದ್ಭವಿಸಿದ್ದ ಪರಿಸ್ಥಿತಿ ಸುಧಾರಿಸಿದೆ ಎಂದು ತಮಗೆ ಮನದಟ್ಟು ಆಗುವವರೆಗೂ ದೆಹಲಿಯಲ್ಲಿ ಶಾಲೆಗಳನ್ನು ತೆರೆಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.

ಸ್ವಾತಂತ್ರ್ಯ ದಿನದಂದು ಪ್ರಮುಖ ಭಾಷಣದಲ್ಲಿ ಅವರು, ಎರಡು ತಿಂಗಳ ಹಿಂದಿನ ಸ್ಥಿತಿಗೆ ಹೋಲಿಸಿದರೆ ಈಗ ಪರಿಸ್ಥಿತಿ ಸುಧಾರಿಸಿದೆ. ಇದರ ಯಶಸ್ಸು ಎಲ್ಲ ಕೊರೊನಾ ವಾರಿಯರ್ಸ್‌ಗಳು ಮತ್ತು ಸಂಘಟನೆಗಳಿಗೆ ಸಲ್ಲಬೇಕು ಎಂದರು.

ಎಎಪಿ ಸರ್ಕಾರಕ್ಕೆ ಶಾಲಾ ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಆರೋಗ್ಯ ಹೆಚ್ಚು ಮುಖ್ಯ. ಸದ್ಯಕ್ಕೆ ಶಾಲೆಗಳನ್ನು ಪುನರಾರಂಭಿಸುವುದು ಬೇಡ ಎಂಬುದು ಬಹುತೇಕ ಪೋಷಕರ ಸಲಹೆಯೂ ಆಗಿದೆ. ಮಕ್ಕಳ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಅವರು ಭರವಸೆ ನೀಡಿದರು.

ADVERTISEMENT

ಸದ್ಯ ದೆಹಲಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1.5 ಲಕ್ಷ ದಾಟಿದೆ. ಶುಕ್ರವಾರ ಸಂಜೆ 1,192 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿದ್ದು 11 ಜನ ಮೃತಪಟ್ಟಿದ್ದಾರೆ. 790 ಜನರು ನಿನ್ನೆ ಒಂದೇ ದಿನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ಒಟ್ಟು ಪ್ರಕರಣಗಳ ಪೈಕಿ, 1 35,108 ಜನರು ಗುಣಮುಖರಾಗಿದ್ದಾರೆ. 11,366 ಜನರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೂ 4178 ಜನರು ಮೃತಪಟ್ಟಿದ್ದಾರೆ. ಕೋವಿಡ್‌ ಆಸ್ಪತ್ರೆ ಹಾಗೂ ಕೋವಿಡ್‌ ಕೇಂದ್ರಗಳಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಹಾಸಿಗೆಗಳಿವೆ. ಇವುಗಳ ಪೈಕಿ 16500 ಕ್ಕೂ ಹೆಚ್ಚು ಹಾಸಿಗೆಗಳು ಖಾಲಿ ಇವೆ.

ದೆಹಲಿಯಲ್ಲಿ ಜುಲೈ ಹಾಗೂ ಆಗಸ್ಟ್‌ ತಿಂಗಳಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತ ಬರುತ್ತಿದೆ. ಮೇ ಮತ್ತು ಜೂನ್‌ ತಿಂಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಿತ್ತು. ಈ ತಿಂಗಳುಗಳಲ್ಲಿ ದಿನವೊಂದಕ್ಕೆ ಗರಿಷ್ಠ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾದ ದಾಖಲೆಗಳಿವೆ.

ಪ್ರಸ್ತುತ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದು ಸೋಂಕಿನ ಪ್ರಮಾಣ ದಿನಕ್ಕೆ ಒಂದು ಸಾವಿರ ಇದೆ. ಚಿಕಿತ್ಸೆ ಪ್ರಮಾಣ ಹೆಚ್ಚಿಸಿರುವುದು. ಲಾಕ್‌ಡೌನ್ ಕ್ರಮಗಳು ಹಾಗೂ ಸಾರ್ವಜನಿಕರ ಜಾಗೃತಿಯೇ ಸೋಂಕಿನ ಪ್ರಮಾಣ ಇಳಿಕೆಗೆ ಕಾರಣ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.