ಸಾಂದರ್ಭಿಕ ಚಿತ್ರ
ಛಾಯ್ಬಾಸ: ಜಾರ್ಖಂಡ್ನ ವೆಸ್ಟ್ ಸಿಂಗಭುಮ್ ಜಿಲ್ಲೆಯ ಸರಂದಾ ಅರಣ್ಯ ಪ್ರದೇಶದಲ್ಲಿ ಎರಡು ಸುಧಾರಿತ ಸ್ಫೋಟಕ ಸಾಧನಗಳು (ಐಇಡಿ) ಸ್ಫೋಟಗೊಂಡು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಇನ್ಸ್ಪೆಕ್ಟರ್ ಹಾಗೂ ಯೋಧ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ.
ರಾಜ್ಯದಲ್ಲಿ 'ಪ್ರತಿರೋಧ ಸಪ್ತಾಹ' ನಡೆಸುತ್ತಿರುವ ಸಿಪಿಐ (ಮಾವೋವಾದಿ) ಸಂಘಟನೆ, ಭದ್ರತಾ ಪಡೆಗಳನ್ನು ಗುರಿಯಾಗಿಸಿ ಐಇಡಿಗಳನ್ನು ಇರಿಸಿರಬಹುದು ಎಂದು ಶಂಕಿಸಲಾಗಿದೆ.
ಜರೈಕೆಲಾ ಪೊಲೀಸ್ ಠಾಣಾ ವ್ಯಾಪ್ತಿಯ ಬದುದಿಹ್ ಪ್ರದೇಶದಲ್ಲಿ ಸಂಭವಿಸಿದ ಸ್ಫೋಟದಿಂದಾಗಿ ಸಿಆರ್ಪಿಎಫ್ ಇನ್ಸ್ಪೆಕ್ಟರ್ ಹಾಗೂ ಯೋಧ ಗಾಯಗೊಂಡಿದ್ದಾರೆ ಎಂದು ಕೊಲ್ಹಾನ್ ವಿಭಾಗದ ಡಿಐಜಿ ಅನುರಂಜನ್ ಕಿಸ್ಪೊಟಾ ಪ್ರತಿಕ್ರಿಯಿಸಿದ್ದಾರೆ.
ಗಾಯಾಳು ಇನ್ಸ್ಪೆಕ್ಟರ್ ಅವರನ್ನು ನೆರೆ ರಾಜ್ಯ ಒಡಿಶಾದ ರೌರ್ಕೆಲಾದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಧನನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಅಕ್ಟೋಬರ್ 8ರಂದು 'ಪ್ರತಿರೋಧ ಸಪ್ತಾಹ' ಆರಂಭಿಸಿರುವ ಸಿಪಿಐ (ಮಾವೋವಾದಿ), ಅಕ್ಟೋಬರ್ 15ರಂದು ಬಂದ್ ಕರೆ ನೀಡಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯದಾದ್ಯಂತ ಭದ್ರತೆ ಬಿಗಿಗೊಳಿಸಿದ್ದಾರೆ.
ಭದ್ರತೆ ಹೆಚ್ಚಿಸುವ ಸಲುವಾಗಿ ಸಿಆರ್ಪಿಎಫ್ನ 12 ಬೆಟಾಲಿಯನ್ಗಳು, ಜಾರ್ಖಂಡ್ ಸಶಸ್ತ್ರ ಪೊಲೀಸ್ (ಜೆಎಪಿ) ಪಡೆಯ 20 ತಂಡಗಳು ಮತ್ತು ಭಾರತೀಯ ರಿಸರ್ವ್ ಬೆಟಾಲಿಯನ್ ಅನ್ನು ನಿಯೋಜಿಸಲಾಗಿದೆ ಎಂದು ಕಾರ್ಯಾಚರಣೆ ವಿಭಾಗದ ಐಜಿ ಮಿಕಾಯಿಲ್ ರಾಜ್ ಗುರುವಾರ ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.