ಫೆಂಜಲ್ ಚಂಡಮಾರುತದಿಂದಾಗಿ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯಲ್ಲಿ ಮನೆಗಳು ಜಲಾವೃತಗೊಂಡಿರುವುದು
ಪಿಟಿಐ ಚಿತ್ರ
ನವದೆಹಲಿ: ಪ್ರವಾಹ ಪೀಡಿತ ತಮಿಳುನಾಡಿಗೆ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಿಂದ (ಎಸ್ಡಿಆರ್ಎಫ್) ₹944.80 ಕೋಟಿ ಪರಿಹಾರ ಬಿಡುಗಡೆ ಮಾಡಲು ಗೃಹ ಸಚಿವಾಲಯ ಅನುಮೋದನೆ ನೀಡಿದೆ.
ನವೆಂಬರ್ 30ರಂದು ಅಪ್ಪಳಿಸಿದ ಫೆಂಜಲ್ ಚಂಡಮಾರುತದಿಂದಾಗಿ ಪ್ರವಾಹಕ್ಕೆ ತುತ್ತಾಗಿರುವ ರಾಜ್ಯದ ಸಂತ್ರಸ್ತರಿಗೆ ನೆರವು ನೀಡಲು ಎಸ್ಡಿಆರ್ಎಫ್ನಿಂದ ₹944.80 ಕೋಟಿಯನ್ನು ಎರಡು ಕಂತುಗಳಲ್ಲಿ ತಮಿಳುನಾಡು ಸರ್ಕಾರಕ್ಕೆ ಬಿಡುಗಡೆ ಮಾಡಲು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಅನುಮೋದನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ.
ಚಂಡಮಾರುತದಿಂದಾಗಿ ಸುರಿದ ಭಾರಿ ಮಳೆಯಿಂದಾಗಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಸಂಭವಿಸಿರುವ ಹಾನಿ ಕುರಿತು ಪರಿಶೀಲಿಸಲು ಅಂತರ–ಸಚಿವಾಲಯದ ಕೇಂದ್ರ ತಂಡವನ್ನು(ಐಎಮ್ಸಿಟಿ) ಕಳುಹಿಸಲಾಗಿದೆ. ಐಎಮ್ಸಿಟಿಯ ಮೌಲ್ಯಮಾಪನ ವರದಿ ಸ್ವೀಕರಿಸಿದ ಬಳಿಕ, ವಿಪತ್ತು ಪೀಡಿತ ರಾಜ್ಯಗಳಿಗೆ ಎನ್ಡಿಆರ್ಎಫ್ನಿಂದ ಹೆಚ್ಚುವರಿ ಆರ್ಥಿಕ ಸಹಾಯವನ್ನು ನೀಡಲಾಗುವುದು ಎಂದು ಪ್ರಕಟಣೆ ಹೇಳಿದೆ.
ಫೆಂಜಲ್ ಚಂಡಮಾರುತದಿಂದ ತಮಿಳುನಾಡಿನಲ್ಲಿ ಉಂಟಾಗಿದ್ದ ಪ್ರವಾಹ ಪರಿಸ್ಥಿತಿ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರು ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಿಂದ (ಎನ್ಡಿಆರ್ಎಫ್) ₹2000 ಕೋಟಿ ತುರ್ತು ಪರಿಹಾರ ನೀಡುವಂತೆ ಮನವಿ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.