ADVERTISEMENT

ದಿಕ್ಕು ಬದಲಿಸಿದ ‘ವಾಯು’ | ಗುಜರಾತ್‌ ಅಪಾಯದಿಂದ ಪಾರು: ಸಿಎಂ ವಿಜಯ್‌ ರೂಪಾನಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2019, 12:32 IST
Last Updated 14 ಜೂನ್ 2019, 12:32 IST
ವಾಯು ಚಂಡಮಾರುತದ ಮುನ್ನೆಚ್ಚರಿಕೆ ನೀಡಿದ್ದರಿಂದ ಗುಜರಾತ್‌ನ ಕಡಲ ತೀರದಲ್ಲಿ ಲಂಗರು ಹಾಕಿದ್ದ ಮೀನುಗಾರರ ದೋಣಿಗಳು. ಚಿತ್ರ: ಎಎಫ್‌ಪಿ
ವಾಯು ಚಂಡಮಾರುತದ ಮುನ್ನೆಚ್ಚರಿಕೆ ನೀಡಿದ್ದರಿಂದ ಗುಜರಾತ್‌ನ ಕಡಲ ತೀರದಲ್ಲಿ ಲಂಗರು ಹಾಕಿದ್ದ ಮೀನುಗಾರರ ದೋಣಿಗಳು. ಚಿತ್ರ: ಎಎಫ್‌ಪಿ   

ಗಾಂಧಿನಗರ:ಗುಜರಾತ್‌ ರಾಜ್ಯದ ತೀರ ಪ್ರದೇಶಗಳಿಗೆ ಅಪ್ಪಳಿಸಲಿದೆ ಎನ್ನಲಾಗಿದ್ದ ‘ವಾಯು’ ಚಂಡಮಾರುತ ದಿಕ್ಕು ಬದಲಿಸಿದ್ದು, ರಾಜ್ಯ ಹೆಚ್ಚಿನ ಅಪಾಯದಿಂದ ಪಾರಾಗಿದೆ ಎಂದು ಗುಜರಾತ್‌ ಮುಖ್ಯಮಂತ್ರಿ ವಿಜಯ್‌ ರೂಪಾನಿ ಅವರು ಶುಕ್ರವಾರ ಹೇಳಿದ್ದಾರೆ.

ಮುಂಜಾಗ್ರತೆಯಾಗಿ ತೀರ ಭಾಗದ ಜಿಲ್ಲೆಗಳಿಂದ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿತ್ತು. ವಿಮಾನಗಳ ಸಂಚಾರ, ಒಟ್ಟು 86 ರೈಲುಗಳ ಸಂಚಾರ ರದ್ದುಪಡಿಸಲಾಗಿತ್ತು. ಸ್ಥಳಾಂತರಗೊಂಡವರ ನೆರವಿಗೆ ಅಗತ್ಯ ಹಣಕಾಸು ನೆರವು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಚಂಡಮಾರುತದಿಂದ ಹೆಚ್ಚು ಹಾನಿ ಉಂಟಾಗಬಹುದು ಎಂದು 10 ಸ್ಥಳಗಳಲ್ಲಿ ನಿಯೋಜಿಸಿದ್ದ ಸಚಿವರು ಮತ್ತು ಅಧಿಕಾರಿಗಳನ್ನು ಹಿಂದಕ್ಕೆ ಮರಳಲು ಸೂಚಿಸುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದೆ. ನಾಳೆ ಶಾಲೆಗಳು ಪುನರಾರಂಭಗೊಳ್ಳಲಿವೆ ಎಂದು ತಿಳಿಸಿದ್ದಾರೆ.

ADVERTISEMENT

ವಾಯು ಚಂಡಮಾರುತ ಅರಬ್ಬಿ ಸಮುದ್ರದಲ್ಲಿ ಗುಜರಾತ್‌ನಿಂದ ಒಮನ್‌ ಕಡೆ ಚಲಿಸುತ್ತಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

‘ವಾಯು’ ಚಂಡಮಾರುತ ದಿಕ್ಕು ಬದಲಿಸಿದ್ದು, ಗುಜರಾತ್‌ಗೆ ಅಪ್ಪಳಿಸುವುದಿಲ್ಲ. ಭಗವಂತನ ಕೃಪೆಯಿಂದಾಗಿ ರಾಜ್ಯ ಅಪಾಯದಿಂದ ಪಾರಾಗಿದ್ದು, ಸುರಕ್ಷಿತವಾಗಿದೆ. 10 ಪ್ರದೇಶಗಳಿಗೆ ಪರಿಸ್ಥಿತಿ ನಿರ್ವಹಿಸಲು ಕಳುಹಿಸಿದ್ದ ಅಧಿಕಾರಿಗಳು ಮತ್ತು ಸಚಿವರನ್ನು ಹಿಂದಕ್ಕೆ ಕರೆಸಿಕೊಳ್ಳಲು ಸರ್ಕಾರ ನಿರ್ಧರಿಸಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಸ್ಥಳಾಂತರ ಗೊಂಡಿದ್ದ ಜನರು ತಮ್ಮ ನಿವಾಸಗಳಿಗೆ ಮರಳಬಹುದು. ಅವರಿಗೆ ಅಗತ್ಯವಿರುವ ಹಣಕಾಸಿನ ನೆರವನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.