ಮುಂಬೈ: ‘ತೌತೆ’ ಚಂಡಮಾರುತವು ಗುಜರಾತ್ನತ್ತ ಸಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಮುಂಬೈ ಸೇರಿದಂತೆ ನೆರೆ ಪ್ರದೇಶಗಳಲ್ಲಿ ಸೋಮವಾರ ಭಾರಿ ಗಾಳಿ, ಮಳೆಯಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.
‘ಮುಂಬೈನಲ್ಲಿ ಪ್ರಬಲ ಗಾಳಿ ಬೀಸುತ್ತಿರುವುದರಿಂದ ಬಾಂದ್ರಾ–ವರ್ಲಿ ಸೇತುವೆಯಲ್ಲಿ ವಾಹನ ಸಂಚಾರವನ್ನು ಮುಚ್ಚಲಾಗಿದ್ದು, ಜನರಿಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಮನವಿ ಮಾಡಲಾಗಿದೆ’ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
‘ದಕ್ಷಿಣ ಮುಂಬೈನ ಕೊಲಾಬಾ ಪ್ರದೇಶದಲ್ಲಿ ಸೋಮವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರತಿ ಗಂಟೆಗೆ 102 ಕಿ.ಮೀ ವೇಗದಲ್ಲಿ ಗಾಳಿ ಬೀಸಿದೆ. ಐಎಂಡಿಯ ಕೊಲಾಬಾ ವೀಕ್ಷಣಾಲಯದಲ್ಲಿ ಬೆಳಿಗ್ಗೆ 8.30 ರಿಂದ 11ತನಕ 79.4 ಮಿ.ಮೀ ಮಳೆ ದಾಖಲಾಗಿದೆ. ಸಾಂತಾಕ್ರೂಜ್ ವೀಕ್ಷಣಾಲಯದಲ್ಲಿ 44.4 ಮಿ.ಮೀ ಮಳೆ ದಾಖಲಾಗಿದೆ’ ಎಂದು ಮುಂಬೈನ ಐಎಂಡಿ ಪ್ರಾದೇಶಿಕ ಕಚೇರಿಯ ಹಿರಿಯ ನಿರ್ದೇಶಕ ಶುಭಾಂಗಿ ಭುಟೆ ಅವರು ಮಾಹಿತಿ ನೀಡಿದರು.
‘ಭಾರಿ ಮಳೆಯಿಂದಾಗಿ ರೈಲು ತಂತಿಯ ಮೇಲೆ ಮರ ಬಿದ್ದು, ಘಾಟ್ಕೊಪರ್ ಮತ್ತು ವಿಕ್ರೊಲಿ ಉಪನಗರ ರೈಲ್ವೆ ಸೇವೆಯಲ್ಲಿ ಅರ್ಧ ಗಂಟೆಯವರೆಗೆ ಅಡಚಣೆ ಉಂಟಾಗಿತ್ತು. ಬೆಳಿಗ್ಗೆ 11.35ಕ್ಕೆ ಚುನಾಭಟಿ ಮತ್ತು ಗುರುತೇಜ್ ಬಹಾದ್ದೂರ್ ರೈಲು ನಿಲ್ದಾಣಗಳ ನಡುವಿನ ರೈಲು ತಂತಿ ಮೇಲೆ ಬ್ಯಾನರ್ವೊಂದು ಬಿದ್ದಿತ್ತು. ಇದನ್ನು ಅರ್ಧಗಂಟೆಯೊಳಗೆ ತೆರವುಗೊಳಿಸಲಾಯಿತು’ ಎಂದು ರೈಲ್ವೆ ವಕ್ತಾರರು ತಿಳಿಸಿದರು.
‘ಹಿಂದ್ಮಾತಾ ಜಂಕ್ಷನ್, ಅಂಧೇರಿ ಮತ್ತು ಮಲಾಡ್ ಸುರಂಗಮಾರ್ಗ ಸೇರಿದಂತೆ ಆರು ತಗ್ಗು ಪ್ರದೇಶಗಳಲ್ಲಿ ಮಳೆ ನೀರು ತುಂಬಿದೆ’ ಎಂದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.