ನವದೆಹಲಿ: ‘ಟಿಬೆಟ್ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ’ ಎಂದು ಚೀನಾ ಎಚ್ಚರಿಸಿದೆ.
2020ರಲ್ಲಿ ಗಾಲ್ವಾನ್ ಕಣಿವೆಯಲ್ಲಿ ಚೀನಾ ಪಡೆಗಳ ಜೊತೆ ಭಾರತದ ಸೇನೆಯು ಸಂಘರ್ಷ ನಡೆದ ಬಳಿಕ ಇದೇ ಮೊದಲ ಬಾರಿಗೆ ಚೀನಾಕ್ಕೆ ತೆರಳಲಿರುವ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಪ್ರವಾಸಕ್ಕೂ ಮುನ್ನ ಆಕ್ಷೇಪ ವ್ಯಕ್ತಪಡಿಸಿದೆ.
‘ದಲೈಲಾಮಾ ಉತ್ತರಾಧಿಕಾರಿ ಮೇಲೆ ತನ್ನ ಪಾತ್ರವಿಲ್ಲ, ಆದರೆ, ಆಯ್ಕೆಗೆ ತಮ್ಮ ದೇಶದ ನಾಯಕರ ಒಪ್ಪಿಗೆ ಅಗತ್ಯ’ ಎಂದು ಚೀನಾವು ಪುನಾರವರ್ತಿಸಿದೆ.
ದಲೈಲಾಮಾ ಅವರು ಇತ್ತೀಚಿಗೆ 90ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಭಾರತದ ಸಚಿವರು ಪಾಲ್ಗೊಂಡಿದ್ದರು. ಇದಕ್ಕೂ ಚೀನಾ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
‘ದಲೈ ಲಾಮಾ ಅವರ ಪುನರ್ಜನ್ಮದ ಕುರಿತು ಭಾರತದಲ್ಲಿರುವ ಶೈಕ್ಷಣಿಕ ಸಮುದಾದಯದವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡುತ್ತಿದ್ದಾರೆ’ ಎಂದು ಭಾರತದ ಚೀನಾ ರಾಯಭಾರ ಕಚೇರಿಯ ವಕ್ತಾರೆ ಯು ಜಿಂಗ್ ಅವರು ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
‘ವಿದೇಶಾಂಗ ನೀತಿಯ ವೃತ್ತಿಪರರಾಗಿ ಕ್ಸಿಜಾಂಗ್ ಸೂಕ್ಷ್ಮತೆಯ ವಿಚಾರದಲ್ಲಿ ಸಂಪೂರ್ಣ ಅರಿವು ಹೊಂದಿರಬೇಕು. ಲಾಮಾ ಅವರ ಪುನರ್ಜನ್ಮ ಹಾಗೂ ಉತ್ತರಾಧಿಕಾರಿ ಆಯ್ಕೆ ವಿಚಾರವು ಅಂತರ್ಗತವಾಗಿ ಚೀನಾದ ಆಂತರಿಕ ವಿಚಾರವಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಬೆಟ್ ಪ್ರಾಂತ್ಯವನ್ನು ಚೀನಾವು ‘ಕ್ಸಿಜಾಂಗ್’ ಎಂದೇ ಕರೆಯುತ್ತದೆ. ಜಿಂಗ್ ಅವರು ಯಾರನ್ನೂ ಕೂಡ ಬೊಟ್ಟುಮಾಡಿ ಆರೋಪಿಸಿಲ್ಲ.
ಜುಲೈ 15ರಂದು ಉತ್ತರ ಚೀನಾದ ತಿಯಾನ್ಜಿನ್ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ಪ್ರಾದೇಶಿಕ ಭದ್ರತಾ ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.