ADVERTISEMENT

ಉತ್ತರಾಖಂಡ ದುರಂತ: ಸಂತಾಪ ಸೂಚಿಸಿದ ಟಿಬೆಟನ್ ಧರ್ಮಗುರು ದಲೈಲಾಮಾ

ಪಿಟಿಐ
Published 10 ಫೆಬ್ರುವರಿ 2021, 13:08 IST
Last Updated 10 ಫೆಬ್ರುವರಿ 2021, 13:08 IST
ಟಿಬೆಟನ್ ಧಾರ್ಮಿಕ ಗುರು ದಲೈಲಾಮಾ
ಟಿಬೆಟನ್ ಧಾರ್ಮಿಕ ಗುರು ದಲೈಲಾಮಾ   

ಧರ್ಮಶಾಲಾ: ಟಿಬೆಟನ್ ಧಾರ್ಮಿಕ ಗುರು ದಲೈಲಾಮಾ ಅವರು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರಿಗೆ ಪತ್ರ ಬರೆದು, ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದಾರೆ.

ಜೋಶಿಮಠದಲ್ಲಿ ಭಾನುವಾರ ಹಿಮನದಿ ಕರಗಿ ಅಲಕಾನಂದ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಮತ್ತು ಪ್ರವಾಹ ಪರಿಸ್ಥಿತಿ ಉಂಟಾಗಿದ್ದರಿಂದಾಗಿ ಅಲ್ಲಿದ್ದ ಎರಡು ಜಲ ವಿದ್ಯುತ್ ಕೇಂದ್ರಗಳು ಸಂಪೂರ್ಣ ಹಾನಿಗೀಡಾದವು ಮತ್ತು ಸ್ಥಳೀಯ ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದವು.

'ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ಅರ್ಪಿಸುತ್ತೇನೆ ಮತ್ತು ಅವರಿಗಾಗಿ ಪ್ರಾರ್ಥಿಸುತ್ತೇನೆ. ಪ್ರವಾಹದಲ್ಲಿ ಕಾಣೆಯಾಗಿರುವವರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಮತ್ತು ಈ ವಿಪತ್ತಿನಿಂದ ಬಳಲುತ್ತಿರುವ ಜನರಿಗೆ ರಕ್ಷಣೆ ನೀಡಲು ತಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡಿದ್ದೇನೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ADVERTISEMENT

'ಉತ್ತರಾಖಂಡದ ಜನರೊಂದಿಗೆ ನಾವಿರುವುದರ ಸೂಚಕವಾಗಿ, ಪರಿಹಾರ ಮತ್ತು ರಕ್ಷಣಾ ಕಾರ್ಯಗಳಿಗೆ ದೇಣಿಗೆ ನೀಡುವಂತೆ ನಾನು ದಲೈಲಾಮಾ ಟ್ರಸ್ಟ್‌ಗೆ ಕೇಳಿಕೊಂಡಿದ್ದೇನೆ' ಎಂದು ತಿಳಿಸಿದ್ದಾರೆ.

ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಪ್ರವಾಹ ಉಂಟಾಗಿ ಸುಮಾರು 125 ಜನರು ಕಾಣೆಯಾಗಿದ್ದು, ಈವರೆಗೂ 32 ಜನರ ಮೃತದೇಹಗಳು ಪತ್ತೆಯಾಗಿದ್ದು, ಉಳಿದವರ ರಕ್ಷಣೆಗಾಗಿ ಶೋಧ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.