ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ
ಪಿಟಿಐ ಚಿತ್ರ
ಡಾರ್ಜಲಿಂಗ್: ಮಹಾತ್ಮಾ ಗಾಂಧಿ ಅವರು 1925ರಲ್ಲಿ ಪರ್ವತಗಳ ನಾಡಿಗೆ ಭೇಟಿ ನೀಡಿದ್ದನ್ನು ಸ್ಮರಿಸುವ ನಿಟ್ಟಿನಲ್ಲಿ ಪಾರಂಪರಿಕ ಡಾರ್ಜಲಿಂಗ್ ಹಿಮಾಲಯನ್ ರೈಲ್ವೆ (DHR) ವತಿಯಿಂದ ಒಂದು ತಿಂಗಳ ‘ಶತಾಬ್ದಿ ಮಾರ್ಚ್’ ಆಯೋಜನೆಗೊಂಡಿದೆ.
ಭಾನುವಾರದಿಂದ ಆರಂಭವಾಗಲಿರುವ ಈ ‘ಶತಾಬ್ದಿ ಮಾರ್ಚ್’ ಪಶ್ಚಿಮ ಬಂಗಾಳದ ಡಾರ್ಜಲಿಂಗ್ ರೈಲ್ವೆ ನಿಲ್ದಾಣದಿಂದ ಆರಂಭಗೊಂಡು ಸಿಲಿಗುರಿ ನಗರ ನಿಲ್ದಾಣದಲ್ಲಿ ನ. 9ರಂದು ಕೊನೆಗೊಳ್ಳಲಿದೆ.
ಮಹಾತ್ಮಾ ಗಾಂಧಿ ಅವರು ಪ್ರಯಾಣಿಸಿದ ಮಾರ್ಗದಲ್ಲಿ ಐದು ವಾರಾಂತ್ಯಗಳಲ್ಲಿ ಈ ರೈಲು ಸಂಚರಿಸಲಿದೆ. ಶತಾಬ್ದಿ ಮಾರ್ಚ್ ಸಾಗುವ ಪ್ರತಿಯೊಂದು ನಿಲ್ದಾಣದಲ್ಲಿ ಅಲ್ಲಿನ ಸಮುದಾಯಕ್ಕೆ ಶತಮಾನದ ಹಿಂದೆ ಗಾಂಧೀಜಿ ಭೇಟಿ ನೀಡಿದ್ದನ್ನು DHR ತಿಳಿಸಿಕೊಡಲಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
1925ರ ಜೂನ್ನಲ್ಲಿ ಮಹಾತ್ಮಾ ಗಾಂಧಿ ಅವರು ಡಾರ್ಜಲಿಂಗ್ಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಪ್ರಖ್ಯಾತ ವಕೀಲ ಹಾಗೂ ಸ್ವರಾಜ್ ಪಕ್ಷದ ಸಂಸ್ಥಾಪಕ ದೇಶಬಂಧು ಚಿತ್ತರಂಜನ್ ದಾಸ್ ಅವರ ಆರೋಗ್ಯ ವಿಚಾರಿಸುವ ಉದ್ದೇಶದಿಂದ ಬಾಪು ಪ್ರಯಾಣ ಕೈಗೊಂಡಿದ್ದರು. ಜೂನ್ 4ರಿಂದ 9ರವರೆಗೆ ದಾಸ್ ಅವರೊಂದಿಗೆ ಗಾಂಧಿ ಅವರೂ ಇದ್ದರು.
ಬ್ರಿಟಿಷ್ ರಾಜ್ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕೈಗೊಳ್ಳಬೇಕಾದ ಭವಿಷ್ಯದ ಹೋರಾಟದ ಹಾದಿಗಳನ್ನು ಗಾಂಧಿ ಅವರು ದಾಸ್ ಅವರೊಂದಿಗೆ ಚರ್ಚಿಸಿದ್ದರು. ಡಾರ್ಜಲಿಂಗ್ನಲ್ಲಿರುವ ಬಂಗಲೆಯಲ್ಲಿದ್ದ ಚಿತ್ತರಂಜನ್ ದಾಸ್ ಅವರು ಕೆಲ ದಿನಗಳ ನಂತರ ನಿಧನರಾದರು.
‘ಇದರ ನೆನಪಿನಲ್ಲಿ ಸಂಚರಿಸಲಿರುವ ‘ಶತಾಬ್ದಿ ಮಾರ್ಚ್’, ಅ. 5ರಂದು ಡಾರ್ಜಲಿಂಗ್ನಿಂದ ಘೂಮ್ನತ್ತ ಪ್ರಯಾಣಿಸಲಿದೆ. ಅ. 11ರಂದು ಘೂಮ್ನಿಂದ ಸೊನಾದ್ಗೆ, ಅ. 12ರಂದು ಸೊನಾದ್ನಿಂದ ತುಂಗ್ಗೆ, ಅ. 18ರಿಂದ ತುಂಗ್ನಿಂದ ಕುರ್ಸೊಂಗ್ಗೆ ಮತ್ತು ಅ. 19ರಂದು ಕುರ್ಸೋಂಗ್ನಿಂದ ಮಹಾನದಿಗೆ ಪ್ರಯಾಣಿಸಲಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಅ. 25ಕ್ಕೆ ಮಹಾನದಿಯಿಂದ ಗಯಾಬರಿಗೆ, ಅ. 26ರಿಂದ ಗಯಾಬರಿಯಿಂದ ತಿಂಧರಿಯಾ, ನ. 1ರಂದು ತಿಂಧರಿಯಾದಿಂದ ರೊಂಗ್ಟೋಂಗ್ಗೆ ಮತ್ತು ನ. 2ರಂದು ಟೋಂಗ್ಟೋಂಗ್ನಿಂದ ಸುಕ್ನಾಗೆ, ನ. 8ರಂದು ಸುಕ್ನಾದಿಂದ ಸಿಲಿಗುರಿ ಜಂಕ್ಷನ್ಗೆ ಮತ್ತು ನ. 9ರಂದು ಸಿಲಿಗುರಿ ಟೌನ್ ನಿಲ್ದಾಣಕ್ಕೆ ಬಂದು ಶತಾಬ್ದಿ ಮಾರ್ಚ್ ಕೊನೆಗೊಳ್ಳಲಿದೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.