ಕೋಲ್ಕತ್ತ: ಪಕ್ಷದ ಒಂದು ಬಣದ ನಾಯಕರ ವೈಯಕ್ತಿಕ ನಿಂದನೆಗಳಿಂದ ಬಹಳ ನೊಂದಿದ್ದೇನೆ ಎಂದು ಪಶ್ಚಿಮ ಬಂಗಾಳ ಅರಣ್ಯ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಟಿಎಂಸಿ ನಾಯಕ ರಜೀಬ್ ಬ್ಯಾನರ್ಜಿ ಹೇಳಿದ್ದಾರೆ.
ಪಕ್ಷವನ್ನು ತ್ಯಜಿಸುವ ಬಗ್ಗೆ ಯೋಚಿಸಿದ್ದೀರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದ್ದಾರೆ.
‘ಪಕ್ಷದ ಕೆಲವು ಹಿರಿಯ ಸದಸ್ಯರ ವಿರುದ್ಧ ನನಗೆ ಅಸಮಾಧಾನವಿತ್ತು ಮತ್ತು ಅದರ ಬಗ್ಗೆ ನಾಯಕತ್ವಕ್ಕೆ ತಿಳಿಸಿದ್ದೆ. ಪಕ್ಷದ ಮುಖ್ಯಸ್ಥರ ಜತೆಗೂ ತಿಳಿಸಿದ್ದೆ. ಆದರೆ, ಏನೂ ಆಗಿಲ್ಲ. ಬದಲಿಗೆ ನನ್ನ ವಿರುದ್ಧ ಕೆಲವು ನಾಯಕರು ವೈಯಕ್ತಿಕ ನಿಂದನೆ ಮಾಡಿದರು’
ರಾಜ್ಯಪಾಲ ಜಗದೀಪ್ ಧನ್ಕರ್ ಅವರನ್ನು ಭೇಟಿಯಾದ ಬಳಿಕ ಮಾಧ್ಯಮದವರ ಜತೆ ಮಾತನಾಡಿದ ರಜೀಬ್, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ತಮ್ಮ ಬಳಿ ಇದ್ದ ನೀರಾವರಿ ಖಾತೆಯನ್ನು ಬದಲಾಯಿಸುವ ವಿಚಾರದಲ್ಲಿ ಸೌಜನ್ಯಯುತವಾಗಿ ನಡೆದುಕೊಳ್ಳದಿರುವುದು ನಿರ್ಧಾರಕ್ಕೆ ಪ್ರಮುಖ ಕಾರಣ ಎಂದಿದ್ದಾರೆ.
‘ಕನಿಷ್ಠ ಸೌಜನ್ಯ ತೋರಬೇಕಿತ್ತು. ಮರುದಿನವೇ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡುವುದಾಗಿ ಮುಖ್ಯಮಂತ್ರಿಗೆ ತಿಳಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.
ಕಳೆದ ಎರಡು ವರ್ಷಗಳಿಂದ ಹಿರಿಯ ನಾಯಕರ ಕುರಿತ ನನ್ನ ಅಸಮಾಧಾನವನ್ನು ಮುಖ್ಯಮಂತ್ರಿಗಳಿಗೆ ತಿಳಿಸಿದ್ದೆ. ಕಳೆದ ಒಂದು ತಿಂಗಳಿನಿಂದ ಪಕ್ಷದ ಕೆಲವು ನಾಯಕರು ನನ್ನ ವಿರುದ್ಧ ವೈಯಕ್ತಿಕ ನಿಂದನೆ ಮಾಡಿರುವುದು ತೀವ್ರ ನೋವುಂಟುಮಾಡಿದೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.