ನಿತೇಶ್ ರಾಣೆ
–ಪಿಟಿಐ ಚಿತ್ರ
ಮುಂಬೈ: ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿರುದ್ಧ ಮುಂಬೈ ನ್ಯಾಯಾಲಯವು ಗುರುವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಪ್ರಕರಣದ ವಿಚಾರಣೆಗೆ ಹಾಜರಾಗಲು ವಿಫಲರಾದ ಕಾರಣ ಮುಂಬೈ ನ್ಯಾಯಾಲಯವು ಕಳೆದ ತಿಂಗಳು ರಾಣೆ ವಿರುದ್ಧ ಜಾಮೀನು ನೀಡಬಹುದಾದ ವಾರಂಟ್ ಹೊರಡಿಸಿತ್ತು.
ಜೂನ್ 2ರಂದು ನಡೆದ ವಿಚಾರಣೆಯ ವೇಳೆ ನಿತೇಶ್ ರಾಣೆ ಹಾಜರಾತಿಯಿಂದ ಶಾಶ್ವತ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಇಂದು (ಗುರುವಾರ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎ. ಕುಲಕರ್ಣಿ ಅವರು ಶಾಶ್ವತ ವಿನಾಯಿತಿ ನಿರಾಕರಿಸಿ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಜುಲೈ 18ಕ್ಕೆ ಪ್ರಕರಣವನ್ನು ಮುಂದೂಡಿದ್ದಾರೆ.
ಇದಕ್ಕೂ ಮುನ್ನ ಪ್ರಕರಣದ ವಿಚಾರಣೆಗೆ ಹಾಜರಾಗಲು ವಿಫಲರಾದ ಕಾರಣ ನ್ಯಾಯಾಲಯವು ರಾಣೆ ವಿರುದ್ಧ ಹಲವು ವಾರಂಟ್ಗಳನ್ನು ಹೊರಡಿಸಿತ್ತು.
2023ರ ಮೇನಲ್ಲಿ ನಿತೇಶ್ ರಾಣೆ ಅವರು ಸಂಜಯ್ ರಾವುತ್ ಅವರನ್ನು ‘ಹಾವು’ ಎಂದು ಕರೆದಿದ್ದರು. ಅವರು (ರಾವುತ್) ಉದ್ಧವ್ ಠಾಕ್ರೆ ನೇತೃತ್ವ ಶಿವಸೇನಾ ಪಕ್ಷವನ್ನು ತೊರೆದು ಎನ್ಸಿಪಿಗೆ ಸೇರಲಿದ್ದಾರೆ ಎಂದು ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿದ್ದ ರಾವುತ್, ನಿತೇಶ್ ರಾಣೆ ಅವರು ಮಾನಹಾನಿಕರ ಮತ್ತು ಸುಳ್ಳು ಹೇಳಿಕೆಗಳನ್ನು ನೀಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೋರಿ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.