ADVERTISEMENT

ರಕ್ಷಣಾ ಇಲಾಖೆ ಭೂಮಿಯ ರಕ್ಷಣೆ ಅತ್ಯಗತ್ಯ: ರಕ್ಷಣಾ ಸಚಿವೆ

ಗಡಿ ರಕ್ಷಣೆಯಷ್ಟೇ ಪ್ರಾಮುಖ್ಯತೆ ಬೇಕಾಗಿದೆ– ನಿರ್ಮಲಾ ಪ್ರತಿಪಾದನೆ

ಪಿಟಿಐ
Published 22 ಡಿಸೆಂಬರ್ 2018, 20:05 IST
Last Updated 22 ಡಿಸೆಂಬರ್ 2018, 20:05 IST

ನವದೆಹಲಿ: ನಗರಗಳಲ್ಲಿರುವ ರಕ್ಷಣಾ ಇಲಾಖೆಯ ಭೂಮಿ ಒತ್ತುವರಿಗೊಳ್ಳುವ ಅಪಾಯವಿದ್ದು, ಇವುಗಳನ್ನು ‘ಅತ್ಯಂತ ಎಚ್ಚರಿಕೆಯಿಂದ ರಕ್ಷಿಸಿಕೊಳ್ಳಬೇಕಿದೆ’ ಎಂದು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

‘ರಕ್ಷಣಾ ಇಲಾಖೆ ಭೂಮಿ ಇರುವ ಸುತ್ತಮುತ್ತಲಿನ ಪ್ರದೇಶಗಳಿಂದ ಒತ್ತುವರಿಯಾಗುವ ಸಂಭವ ಹೆಚ್ಚಿರುತ್ತದೆ. ಒಮ್ಮೆ ಒತ್ತುವರಿಯಾದರೆ ಬಳಿಕ ತೆರವುಗೊಳಿಸಲು ಸಂಬಂಧಪಟ್ಟ ಎಲ್ಲರೂ ಸಾಕಷ್ಟು ಕಷ್ಟಪಡಬೇಕಾಗುತ್ತದೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ರಕ್ಷಣಾ ಪ್ರದೇಶಗಳ ಪ್ರಧಾನ ನಿರ್ದೇಶನಾಲಯ (ಡಿಜಿಡಿಇ) ಆಯೋಜಿಸಿದ್ದ, ‘2018ರ ಸಾಧನೆಗೆ ರಕ್ಷಾ ಮಂತ್ರಿ ಪ್ರಶಸ್ತಿ’ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು ‘ರಕ್ಷಣಾ ಇಲಾಖೆಯ ಯಾವುದೇ ಭೂಮಿ ಒತ್ತುವರಿಗೊಳ್ಳದಂತೆ ನೋಡಿಕೊಳ್ಳಲು ಸೇನಾಧಿಕಾರಿಗಳು ಹಾಗೂ ಮುನ್ಸಿಪಲ್ ಅಧಿಕಾರಿಗಳ ನಡುವೆ ಹೆಚ್ಚಿನ ಸಾಮರಸ್ಯ ಅವಶ್ಯ’ ಎಂದು ತಿಳಿಸಿದ್ದಾರೆ.

ADVERTISEMENT

‘ದೇಶದ ಗಡಿ ರಕ್ಷಣೆ ಎಷ್ಟು ಮುಖ್ಯವೋ ರಕ್ಷಣಾ ಇಲಾಖೆಯ ಭೂಮಿಗಳನ್ನು ಕಾಪಾಡಿಕೊಳ್ಳುವುದು ಸಹ ಅಷ್ಟೇ ಮುಖ್ಯ. ಹಲವು ಲಕ್ಷ ಎಕರೆ ಜಾಗಗಳು ಡಿಜಿಡಿಇ ವ್ಯಾಪ್ತಿಗೆ ಬರುತ್ತವೆ. ಇವು ಸಾಕಷ್ಟು ದೂರ ದೂರದಲ್ಲಿ ಹಾಗೂ ದೇಶದ ಒಳನಾಡುಗಳಲ್ಲಿ ಇರಬಹುದು. ಆದರೆ ತುರ್ತು ಪರಿಸ್ಥಿತಿ ಎದುರಿಸಲು, ದೇಶದ ರಕ್ಷಣೆಗಾಗಿ ಹಾಗೂ ಯೋಧರನ್ನು ನಿಯೋಜಿಸಲು ರಕ್ಷಣಾ ಸ್ವತ್ತುಗಳು ಎಲ್ಲೆಡೆ ಇರುವುದು ಮುಖ್ಯ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.