ADVERTISEMENT

ದೆಹಲಿ: ಜಲಾವೃತ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಬಸ್‌ನಿಂದ 40 ಪ್ರಯಾಣಿಕರ ರಕ್ಷಣೆ

ಪಿಟಿಐ
Published 11 ಸೆಪ್ಟೆಂಬರ್ 2021, 11:27 IST
Last Updated 11 ಸೆಪ್ಟೆಂಬರ್ 2021, 11:27 IST
ದೆಹಲಿಯ ಪಾಲಂ ಅಂಡರ್‌ಪಾಸ್
ದೆಹಲಿಯ ಪಾಲಂ ಅಂಡರ್‌ಪಾಸ್   

ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರಿ ಮಳೆಯಿಂದಾಗಿ ಜಲಾವೃತವಾದ ಅಂಡರ್‌ಪಾಸ್‌ನಲ್ಲಿ ಸಿಲುಕಿದ್ದ ಬಸ್‌ನಿಂದ 40 ಪ್ರಯಾಣಿಕರನ್ನು ರಕ್ಷಿಸಲಾಗಿದೆ.

ಶನಿವಾರ ಬೆಳಗ್ಗೆ ಸುರಿದ ಭಾರಿ ಮಳೆಯಿಂದಾಗಿ ಪಾಲಂ ಫ್ಲೈಓವರ್‌ನ ಅಂಡರ್‌ಪಾಸ್‌ನಲ್ಲಿ ಖಾಸಗಿ ಬಸ್‌ವೊಂದು ಸಿಲುಕಿತ್ತು. ಮಥುರಾಗೆ ತೆರಳುತ್ತಿದ್ದ ಈ ಬಸ್‌ನಲ್ಲಿ ಮಹಿಳೆಯರು ಹಾಗೂ ಮಕ್ಕಳು ಇದ್ದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಪ್ರಯಾಣಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿಯಲ್ಲಿ ಶನಿವಾರ ಬೆಳಗ್ಗೆಯಿಂದಲೇ ಭಾರಿ ಮಳೆಯಾಗುತ್ತಿದ್ದು, ಅನೇಕ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲದೆ ಭಾರಿ ವಾಹನ ದಟ್ಟಣೆ ಕಂಡುಬಂದಿದೆ.

ಸ್ಥಳೀಯ ಆಡಳಿತಗಳ ಮಾಹಿತಿ ಪ್ರಕಾರ, ದೆಹಲಿ ವಿಮಾನ ನಿಲ್ದಾಣ ಸೇರಿದಂತೆ ನಗರದ ಮೋತಿ ಬಾಘ್‌, ಆರ್‌.ಕೆ. ಪುರಂ, ಮಧು ವಿಹಾರ್, ಹರಿನಗರ, ರೋಹ್ಟಕ್ ರಸ್ತೆ, ಬದಾರ್‌ಪುರ, ಸೋಮ್ ವಿಹಾರ, ವರ್ತುಲ ರಸ್ತೆ ಸಮೀಪವಿರುವ ಐಪಿ ಸ್ಟೇಷನ್, ವಿಕಾಸ್ ಮಾರ್ಗ್, ಸಂಗಮ್ ವಿಹಾರ್, ಮೆಹುರುಲಿ–ಬಾದರ್‌ಪುರ ರಸ್ತೆ, ಪೌಲ್ ಪ್ರಹ್ಲಾಪುರ ಕೆಳ ಸೇತುವೆ, ಮುನಿರ್ಕಾ, ರಾಜ್‌ಪುರ ಖುರ್ದ್‌, ನಂಗ್ಲೊಯಿ ಮತ್ತು ಕಿರಾರಿ ಪ್ರದೇಶಗಳೆಲ್ಲ ಜಲಾವೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.