
ದೆಹಲಿಯ ಇಂಡಿಯಾ ಗೇಟ್ ಬಳಿ ಪ್ರತಿಭಟನೆ ನಡೆಸಿದವರು ಫಲಕ ಹಿಡಿದು ಘೋಷಣೆ ಕೂಗಿದರು
ಪಿಟಿಐ ಚಿತ್ರ
ನವದೆಹಲಿ: ದೆಹಲಿಯಲ್ಲಿ ಮಿತಿ ಮೀರಿರುವ ವಾಯು ಮಾಲಿನ್ಯದಿಂದ ತೀವ್ರ ಅಸಮಾಧಾನಗೊಂಡ ಹಲವರು ದೆಹಲಿಯ ಇಂಡಿಯಾ ಗೇಟ್ ಬಳಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ, 15 ಜನರನ್ನು ಪೊಲೀಸರು ಇಂದು (ಸೋಮವಾರ) ಬಂಧಿಸಿದ್ದಾರೆ.
ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಹಲ್ಲೆ ನಡೆಸಿದ ಆರೋಪ ಇವರ ಮೇಲಿದೆ.
ರಾಷ್ಟ್ರ ರಾಜಧಾನಿಯ ಸಿ–ಹೆಕ್ಸಾಗನ್ ಬಳಿ ಭಾನುವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ವಾಹನ ಸಂಚಾರಕ್ಕೆ ಅಡ್ಡಿ ಮಾಡದಂತೆ ಪ್ರತಿಭಟನಾಕಾರರಿಗೆ ತಿಳಿಸಿದರು. ಇದರಿಂದ ಆಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಯಾಣಕ್ಕೆ ತೊಂದರೆಯಾಗಲಿದೆ ಎಂದೂ ತಿಳಿಸಿದರು. ಇದನ್ನು ಲೆಕ್ಕಿಸಿದ ಪ್ರತಿಭಟನಾಕಾರರನ್ನು ಚದುರಿಸಲು ಯತ್ನಿಸಿದ ಪೊಲೀಸರತ್ತ ಕೆಲವರು ‘ಪೆಪ್ಪರ್ ಸ್ಪ್ರೇ’ ಸಿಂಪಡಿಸಿದರು ಎಂದು ಪೊಲೀಸ್ ಮೂಲಗಳು ಹೇಳಿವೆ.
ಇದು ನಂತರ ವಿಕೋಪಕ್ಕೆ ತಿರುಗಿತು. ಪೆಪ್ಪರ್ ಸ್ಪ್ರೇ ಬಳಸಿ ಹಲ್ಲೆಗೆ ಮುಂದಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, 15 ಜನರನ್ನು ಬಂಧಿಸಿದ್ದಾರೆ.
‘ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ತೀರಾ ಅಪಾಯಮಟ್ಟಕ್ಕೆ ತಲಪುತ್ತಿದೆ. ಇದು ತೀರಾ ಗಂಭೀರ ವಿಷಯ. ಇದರಿಂದ ಸಾರ್ವಜನಿಕ ಆರೋಗ್ಯ ಹದಗೆಡಲಿದೆ. ಇದನ್ನು ಪರಿಹರಿಸಲು ಮತ್ತು ಮೂಲ ಕಾರಣವನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ’ ಎಂದು ಶುದ್ಧ ಗಾಳಿಗಾಗಿ ದೆಹಲಿ ಸಮನ್ವಯ ಸಮಿತಿ ಆರೋಪಿಸಿ ಪ್ರಕಟಣೆ ಹೊರಡಿಸಿದೆ.
ಗಾಳಿಯ ಗುಣಮಟ್ಟ ತೀರಾ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಆದರೆ ಸರ್ಕಾರ ಮಾತ್ರ ಗಾಳಿಯ ಗುಣಮಟ್ಟ ಸೂಚ್ಯಂಕ (AQI) ಇರುವ ಯಂತ್ರಗಳ ಬಳಿ ನೀರು ಸಿಂಪಡಿಸುವುದು, ಮೋಡ ಬಿತ್ತನೆ ಮಾಡುವ ಮೂಲಕ ತೋರಿಕೆಗೆ ಕೆಲಸ ಮಾಡುತ್ತಿದೆ. ಆದರೆ ದೀರ್ಘಕಾಲ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.