ADVERTISEMENT

ದೆಹಲಿ ಸ್ಫೋಟ–ಫರಿದಾಬಾದ್‌ನಲ್ಲಿ ಸ್ಫೋಟಕ ಪತ್ತೆಗೂ ನಂಟು? ಶೋಧ ತೀವ್ರ

ಪಿಟಿಐ
Published 11 ನವೆಂಬರ್ 2025, 12:25 IST
Last Updated 11 ನವೆಂಬರ್ 2025, 12:25 IST
   

Police conduct search operation in Faridabad day after recovery of huge cache of explosives

ಫರಿದಾಬಾದ್: ಹರಿಯಾಣದ ಫರಿದಾಬಾದ್‌ನಲ್ಲಿ ಕಾಶ್ಮೀರಿ ವೈದ್ಯ ಬಾಡಿಗೆಗಿದ್ದ ಎರಡು ರೂಮ್‌ಗಳಿಂದ 2,900 ಕೆ.ಜಿ ಸ್ಫೋಟಕ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು ಮಂಗಳವಾರ ಭಾರಿ ಕೂಂಬಿಂಗ್ ಮತ್ತು ಶೋಧ ಕಾರ್ಯಾಚರಣೆ ಕೈಗೊಂಡಿದ್ದಾರೆ.

ಫರಿದಾಬಾದ್‌ನಲ್ಲಿ ಬಯಲಾದ ಭಯೋತ್ಪಾದಕ ಜಾಲ ಮತ್ತು ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಸ್ಫೋಟಕ್ಕೂ ನಂಟಿರುವ ಬಗ್ಗೆ ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ.

ADVERTISEMENT

ಕಾಶ್ಮೀರಿ ವೈದ್ಯ ಮೂರು ವರ್ಷಗಳಿಂದ ವಾಸವಿದ್ದ ಅಲ್ ಫಲಾಹ್ ವಿಶ್ವವಿದ್ಯಾಯದಲ್ಲಿ ಪೊಲೀಸರ ತಂಡ ಬೀಡುಬಿಟ್ಟಿದ್ದು, ಸಿಬ್ಬಂದಿ ಮತ್ತು ವೈದ್ಯರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ದೆಹಲಿಯಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಹರಿಯಾಣದ ಫರಿದಾಬಾದ್ ಜಿಲ್ಲೆಯ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯವು ಯುಜಿಸಿಯಿಂದ ಮಾನ್ಯತೆ ಪಡೆದ ಖಾಸಗಿ ಸಂಸ್ಥೆಯಾಗಿದೆ. ಧೌಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರ ತಂಡ ಶೋಧ ನಡೆಸುತ್ತಿದೆ,

‘ರಾಜ್ಯದ ಪರಿಸ್ಥಿತಿ ಶಾಂತಿಯುತವಾಗಿದೆ. ಪೊಲೀಸರು ಮತ್ತು ಇತರ ಏಜೆನ್ಸಿಗಳು ಕಟ್ಟೆಚ್ಚರ ವಹಿಸಿವೆ’ಎಂದು ಹರಿಯಾಣ ಪೊಲೀಸ್ ಮುಖ್ಯಸ್ಥ ಓ.ಪಿ. ಸಿಂಗ್ ಅವರು ಮಂಗಳವಾರ ಎಕ್ಸ್‌ ಪೋಸ್ಟ್‌ನಲ್ಲಿ, ತಿಳಿಸಿದ್ದಾರೆ.

ಮತ್ತೊಂದು ಪೋಸ್ಟ್‌ನಲ್ಲಿ, ಫರಿದಾಬಾದ್‌ನಲ್ಲಿ ಹೊಸದಾಗಿ ಸ್ಫೋಟಕಗಳು ಪತ್ತೆಯಾಗಿವೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದು, ಫರಿದಾಬಾದ್‌ನಲ್ಲಿ ದೀಪಾವಳಿ ಪಟಾಕಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವು ಸ್ಫೋಟಕಗಳಲ್ಲ ಎಂದು ಹೇಳಿದ್ದಾರೆ.

‘ಹರಿಯಾಣದಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಶಾಂತಿಯುತವಾಗಿದೆ. ಕಟ್ಟೆಚ್ಚರ ವಹಿಸಲಾಗಿದೆ. ವದಂತಿಗಳನ್ನು ಹರಡಬೇಡಿ ಅಥವಾ ನಂಬಬೇಡಿ’ಎಂದು ಅವರು ಹೇಳಿದ್ದಾರೆ.

ಯಾವುದೇ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿ ಕಂಡುಬಂದರೆ ತುರ್ತು ಸಹಾಯವಾಣಿ ಸಂಖ್ಯೆ 112ಕ್ಕೆ ಕರೆ ಮಾಡುವಂತೆ ಸಿಂಗ್ ಈ ಹಿಂದಿನ ಪೋಸ್ಟ್‌ನಲ್ಲಿ ಜನರಿಗೆ ಮನವಿ ಮಾಡಿದ್ದರು.

ಇಲ್ಲಿಯವರೆಗೆ ನಡೆದಿರುವ ತನಿಖೆಯಲ್ಲಿ, ಧರ್ಮಗುರುವೊಬ್ಬರು ತಮ್ಮ ಕೊಠಡಿಯನ್ನು ಆಟೊರಿಕ್ಷಾ ಚಾಲಕನೊಬ್ಬನಿಗೆ ಬಾಡಿಗೆಗೆ ನೀಡಿದ್ದರು. ಆ ಚಾಲಕ ಅದನ್ನು ಲಗೇಜ್ ಇಟ್ಟುಕೊಳ್ಳಲು ಕಾಶ್ಮೀರಿ ವೈದ್ಯ ಡಾ. ಮುಜಮ್ಮಿಲ್ ಗನೈಗೆ ನೀಡಿದ್ದನು ಎಂದು ತಿಳಿದುಬಂದಿದೆ.

ಸೋಮವಾರ ಮೂವರು ವೈದ್ಯರು ಸೇರಿದಂತೆ ಎಂಟು ಜನರನ್ನು ಬಂಧಿಸಲಾಗಿದ್ದು, ಜೈಶ್ ಎ ಮೊಹಮ್ಮದ್ ಮತ್ತು ಅನ್ಸರ್ ಘಜ್ವತ್-ಉಲ್-ಹಿಂದ್ ಒಳಗೊಂಡ ವೈಟ್ ಕಾಲರ್ ಭಯೋತ್ಪಾದನಾ ಜಾಲವನ್ನು ಭೇದಿಸುವ ಜೊತೆಗೆ 2,900 ಕೆಜಿ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿತ್ತು.

15 ದಿನಗಳ ಕಾರ್ಯಾಚರಣೆಯ ಭಾಗವಾಗಿ ಡಾ. ಮುಜಮ್ಮಿಲ್ ಮತ್ತು ಲಖನೌ ವೈದ್ಯ ಡಾ ಶಹೀನ್ ಸೇರಿ 8 ಜನರನ್ನು ಬಂಧಿಸಲಾಗಿತ್ತು.

ಶ್ರೀನಗರದಲ್ಲಿ ಜೈಶ್ ಎ ಮೊಹಮ್ದದ್ ಬೆಂಬಲಿಸಿ ಪೋಸ್ಟ್ರ್ ಹಾಕಿದ್ದ ಮುಜಮ್ಮಿಲ್‌ನನ್ನು ವಾಂಟೆಡ್ ವ್ಯಕ್ತಿ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಘೋಷಿಸಿದ್ದರು. ತನಿಖೆ ವೇಳೆ ಮುಜಮ್ಮಿಲ್ ಚಟುವಟಿಕೆಗಳು ಅನುಮಾನಾಸ್ಪದವಾಗಿದ್ದದ್ದು ಕಂಡುಬಂದಿದೆ. ಫರಿದಾಬಾದ್‌ನ ಅಪರಾಧ ವಿಭಾಗದ ಪೊಲೀಸರ ನೆರವಿನೊಂದಿಗೆ ಕಾಶ್ಮೀರದ ನೌಜನ್ ಠಾಣೆಯ ಪೊಲೀಸರು ಮುಜಮ್ಮಿಲ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.