ನವದೆಹಲಿ: ವಿಯೆನ್ನಾದಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಪತ್ತೆಯಾದ ಬೆನ್ನಲ್ಲೇ ಸಹ ಪ್ರಯಾಣಿಕರು ಆರೋಗ್ಯ ತಪಾಸಣೆಗೆ ಸಹಕರಿಸುವಂತೆ ಏರ್ ಇಂಡಿಯಾ ಮನವಿ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿದ ಏರ್ ಇಂಡಿಯಾ, ಫೆಬ್ರುವರಿ 25ರಂದು ವಿಯೆನ್ನಾದಿಂದ ದೆಹಲಿಗೆ ಬಂದ ಎಐ154 ವಿಮಾನದಲ್ಲಿ ಪ್ರಯಾಣಿಸಿದ ಪ್ರಯಾಣಿಕರೊಬ್ಬರಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಹಾಗಾಗಿ ಕೊರೊನಾ ವೈರಸ್ ಸೋಂಕು ತಪಾಸಣೆಗಾಗಿ ಆರೋಗ್ಯ ಸಚಿವಾಲಯ ನೀಡಿರುವ ನಿರ್ದೇಶನಗಳನ್ನುಪಾಲಿಸಿ ಎಂದಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆ ಪ್ರಕಾರ ದಕ್ಷಿಣ ಕೊರಿಯಾ , ಇರಾನ್ ಮತ್ತು ಇಟೆಲಿಯಿಂದ ಬರುವ ಪ್ರಯಾಣಿಕರನ್ನು 14 ದಿನಗಳ ಕಾಲ ಇತರರ ಸಂಪರ್ಕದಿಂದ ದೂರವಿರಿಸಲಾಗುವುದು. ಇದರೊಂದಿಗೆ ಕೊರೊನಾ ವೈರಸ್ ಬಾಧಿತ ರಾಷ್ಟ್ರಗಳಿಂದ ಆಗಮಿಸುವ ಪ್ರಯಾಣಿಕರನ್ನು ತಪಾಸಣೆಗೊಳಪಡಿಸಬೇಕು ಎಂದು ದೇಶದಾದ್ಯಂತವಿರುವ 21 ವಿಮಾನ ನಿಲ್ದಾಣಗಳಿಗೆ ಸೂಚನೆ ನೀಡಲಾಗಿದೆ.
ಕೊರೊನಾ ವೈರಸ್ ಸೋಂಕಿನ ಬಗ್ಗೆ ಆರೋಗ್ಯ ತಪಾಸಣೆ ಮಾಡಿಕೊಳ್ಳಿ ಎಂದು ವಿಯೆನ್ನಾದಿಂದ ದೆಹಲಿಗೆ ಪ್ರಯಾಣಿಸಿದ ಸಹಪ್ರಯಾಣಿಕರಿಗೆ ಏರ್ ಇಂಡಿಯಾ ಹೇಳಿದೆ.
ಸೋಮವಾರ ದೆಹಲಿಗೆ ಬಂದಿಳಿದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿತ್ತು. ಈ ವ್ಯಕ್ತಿಯ ಮಕ್ಕಳು ಕಲಿಯುತ್ತಿರುವ ಖಾಸಗಿ ಶಾಲೆಕೊರೊನಾ ಭೀತಿಯಿಂದಾಗಿ ಕೆಲವು ದಿನಗಳ ಕಾಲ ತರಗತಿ ನಡೆಸದಿರಲು ತೀರ್ಮಾನಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.