ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಭಾನುವಾರ ವಿಚಾರಣೆಗೆ ಒಳಪಡಿಸಲಿದೆ.
ಸಿಸೋಡಿಯಾ ಅವರನ್ನು ಬಂಧಿಸುವ ಸಾಧ್ಯತೆಗಳಿಗೆ ಎಂದು ಸಿಬಿಐನ ಉನ್ನತ ಮೂಲಗಳು ತಿಳಿಸಿವೆ.
ಈ ಬೆನ್ನಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾನುವಾರ ಟ್ವೀಟ್ ಮಾಡಿದ್ದು, ‘ದೇವರು ನಿಮ್ಮೊಂದಿಗಿದ್ದಾನೆ ಮನೀಶ್, ಲಕ್ಷಾಂತರ ಮಕ್ಕಳು, ಅವರ ಪೋಷಕರ ಆಶೀರ್ವಾದ ನಿಮ್ಮ ಮೇಲಿದೆ. ದೇಶ, ಸಮಾಜದ ಒಳಿತಿಗೆ ಜೈಲಿಗೆ ಹೋಗುವುದು ಕೀರ್ತಿಯಾಗಿದೆ. ನೀನು ಬೇಗ ಜೈಲಿನಿಂದ ವಾಪಸ್ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಮಕ್ಕಳು ಹಾಗೂ ದೆಹಲಿ ಜನತೆ ನಿಮಗಾಗಿ ಕಾಯುತ್ತಿದ್ದೇವೆ‘ ಎಂದು ಟ್ವೀಟ್ ಮಾಡಿದ್ದಾರೆ.
ಅರವಿಂದ್ ಕೇಜ್ರಿವಾಲ್ ಟ್ವೀಟ್ ಗಮನಿಸಿದರೆ, ಮನೀಶ್ ಸಿಸೋಡಿಯಾ ಅವರ ಬಂಧನವಾಗುವುದು ಖಚಿತ ಎಂದು ವರದಿಯಾಗಿದೆ. ನಾನು ಯಾವುದಕ್ಕೂ ಹೆದರುವುದಿಲ್ಲ, ಕೆಲವು ತಿಂಗಳುಗಳ ಕಾಲ ಜೈಲಿನಲ್ಲಿ ಇರಬಲ್ಲೇ ಎಂದು ಸಿಸೋಡಿಯಾ ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮನೀಶ್ ಸಿಸೋಡಿಯಾ ಅವರ ನಿವಾಸ ಹಾಗೂ ಸಿಬಿಐ ಕಚೇರಿ ಸುತ್ತ ಭಾರೀ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಸಶಸ್ತ್ರ ಪಡೆಗಳನ್ನು ಅಲ್ಲಿ ನಿಯೋಜಿಸಲಾಗಿದೆ.
ಈಗಾಗಲೇ ಜಾರಿ ನಿರ್ದೇಶನಾಲಯವು (ಇ.ಡಿ) ಮತ್ತು ಸಿಬಿಐ ದೂರುಗಳನ್ನು ದಾಖಲಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಇ.ಡಿ ಕೂಡ ಎರಡು ಚಾರ್ಜ್ಶೀಟ್ ಫೈಲ್ ಮಾಡಿದ್ದು ಇಲ್ಲಿಯವರೆಗೂ ಹಲವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.