
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಮುಖ್ಯಸ್ಥ, ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ 21 ಜನರನ್ನು ಖುಲಾಸೆಗೊಳಿಸಿ ದೆಹಲಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. ಈ ಆದೇಶವನ್ನು ಪ್ರಶ್ನಿಸಿ ಸಿಬಿಐ ದೆಹಲಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದೆ.
ಈ ಆರೋಪಿಗಳು ಪಿತೂರಿ ನಡೆಸುವ ಅಥವಾ ಅಪರಾಧ ಎಸಗುವ ಉದ್ದೇಶ ಹೊಂದಿದ್ದರು ಎಂಬುದನ್ನು ಸಾಬೀತುಪಡಿಸುವಲ್ಲಿ ಸಿಬಿಐ ವಿಫಲವಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ನಿರ್ದೋಷಿಗಳೆನಿಸಿಕೊಂಡ ಇತರ 21 ಜನರಲ್ಲಿ ‘ತೆಲಂಗಾಣ ಜಾಗೃತಿ’ಯ ಅಧ್ಯಕ್ಷೆ ಕೆ. ಕವಿತಾ ಕೂಡ ಇದ್ದಾರೆ.
ಈ ಪ್ರಕರಣದಲ್ಲಿ ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯನ್ನು ಪರಿಗಣಿಸಲು ನ್ಯಾಯಾಧೀಶ ಜಿತೇಂದ್ರ ಸಿಂಗ್ ನಿರಾಕರಿಸಿದರು. ‘ತನಿಖಾ ಸಂಸ್ಥೆಯು ಕೇವಲ ಊಹೆಗಳ ಆಧಾರದ ಮೇಲೆ ಪಿತೂರಿಯ ನಿರೂಪಣೆ ಮಾಡಲು ಪ್ರಯತ್ನಿಸಿದೆ’ ಎಂದು ಅವರು ಸಿಬಿಐ ಅನ್ನು ಕಟುವಾಗಿ ಟೀಕಿಸಿದರು. ಈ ಪ್ರಕರಣದಲ್ಲಿ ಕೇಜ್ರಿವಾಲ್ ಆರು ತಿಂಗಳು, ಸಿಸೋಡಿಯಾ ಎರಡು ವರ್ಷ ಜೈಲಿನಲ್ಲಿದ್ದರು.
ಹಲವು ಲೋಪಗಳು: ‘ತನಿಖೆಯಲ್ಲಿ ಹಲವು ಲೋಪಗಳಿವೆ. ಕೇಜ್ರಿವಾಲ್ ವಿರುದ್ಧ ಯಾವುದೇ ಪ್ರಬಲ ಸಾಕ್ಷ್ಯಾಧಾರ, ಪುರಾವೆ ಇಲ್ಲ. ಅಂತೆಯೇ ಸಿಸೋಡಿಯಾ ಮತ್ತು ಇತರ ಆರೋಪಿಗಳ ವಿರುದ್ಧ ಮೇಲ್ನೋಟಕ್ಕೆ ಸಾಬೀತುಪಡಿಸಬಲ್ಲ ದಾಖಲೆಗಳಿಲ್ಲ. ಅಲ್ಲದೆ ಅಬಕಾರಿ ನೀತಿ ರೂಪಿಸುವಲ್ಲಿ ಯಾವುದೇ ಸಾಮಾನ್ಯ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶವೂ ಪತ್ತೆಯಾಗಿಲ್ಲ’ ಎಂದು ನ್ಯಾಯಾಧೀಶರು ಹೇಳಿದರು.
‘ಬೃಹತ್ ದೋಷಾರೋಪ ಪಟ್ಟಿಯಲ್ಲಿ ಸಾಕ್ಷ್ಯಗಳು ದೃಢೀಕರಿಸದ ಹಲವು ದೋಷಗಳಿದ್ದು, ಕೆಲವು ದಾರಿ ತಪ್ಪಿಸುವ ಹೇಳಿಕೆಗಳನ್ನು ಒಳಗೊಂಡಿವೆ. ಅಲ್ಲದೆ ಆಂತರಿಕ ವಿರೋಧಾಭಾಸಗಳಿಂದಲೂ ಕೂಡಿದೆ’ ಎಂದು ಅವರು ಹೇಳಿದರು.
ಗಂಭೀರ ಉಲ್ಲಂಘನೆ: ‘ಮಾಫಿ ಸಾಕ್ಷಿದಾರರ ಹೇಳಿಕೆಗಳನ್ನೇ ಆಧರಿಸಿ ಇಡೀ ಪ್ರಕರಣವನ್ನು ಹೆಣೆಯಲಾಗಿದೆ. ಇದು ಸಾಂವಿಧಾನಿಕ ತತ್ವಗಳ ಗಂಭೀರ ಉಲ್ಲಂಘನೆ ಆಗುತ್ತದೆ’ ಎಂದು ನ್ಯಾಯಾಧೀಶರು ಟೀಕಿಸಿದರು.
‘ಯಾವುದೇ ಪುರಾವೆ ಇಲ್ಲದ ಕಾರಣ ಕೇಜ್ರಿವಾಲ್ ವಿರುದ್ಧದ ಆರೋಪಗಳನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂದ ನ್ಯಾಯಾಧೀಶರು, ‘ಸಾಕ್ಷ್ಯಾಧಾರಗಳಿಲ್ಲದೆ ಮಾಜಿ ಮುಖ್ಯಮಂತ್ರಿ ವಿರುದ್ಧ ದೋಷಾರೋಪಣೆ ಮಾಡಲಾಗಿದ್ದು, ಅದು ಕಾನೂನಿನ ನಿಯಮಗಳಿಗೆ ಹೊಂದಿಕೆ ಆಗುವುದಿಲ್ಲ’ ಎಂದೂ ಹೇಳಿದರು.
‘ಸಿಸೋಡಿಯಾ ಅವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುವ ಕುರಿತೂ ಯಾವುದೇ ದಾಖಲೆ ಇಲ್ಲ. ಅವರಿಂದ ಅಂಥ ಯಾವುದೇ ದಾಖಲೆಯನ್ನೂ ತನಿಖಾ ಸಂಸ್ಥೆ ವಶಪಡಿಸಿಕೊಂಡಿಲ್ಲ’ ಎಂದು ಅವರು ತಿಳಿಸಿದರು.
ಖುಲಾಸೆಗೊಂಡ ಇತರರು: ಕುಲದೀಪ್ ಸಿಂಗ್, ನರೇಂದರ್ ಸಿಂಗ್, ವಿಜಯ್ ನಾಯರ್, ಅಭಿಷೇಕ್ ಬೋಯನಪಲ್ಲಿ, ಅರುಣ್ ರಾಮಚಂದ್ರ ಪಿಳ್ಳೈ, ಮೂತ ಗೌತಮ್, ಸಮೀರ್ ಮಹೇಂದ್ರು, ಅಮನದೀಪ್ ಸಿಂಗ್ ಧಲ್, ಅರ್ಜುನ್ ಪಾಂಡೆ, ಬುಚ್ಚಿಬಾಬು ಗೋರ್ನಾಟ್ಲಾ, ರಾಕೇಶ್ ಜೋಶಿ, ದಾಮೋದರ್ ಪ್ರಸಾದ್ ಶರ್ಮಾ, ಪ್ರಿನ್ಸ್ ಕುಮಾರ್, ಚನ್ಪ್ರೀತ್ ಸಿಂಗ್ ರಾಯತ್, ಅರವಿಂದ ಕುಮಾರ್ ಸಿಂಗ್, ದುರ್ಗೇಶ್ ಪಾಠಕ್, ಅಮಿತ್ ಅರೋರಾ, ವಿನೋದ್ ಚೌಹಾಣ್, ಆಶಿಶ್ ಮಾಥುರ್ ಮತ್ತು ಪಿ. ಶರತ್ ಚದ್ರಾ ರೆಡ್ಡಿ ಅವರನ್ನು ನ್ಯಾಯಾಲಯ ಈ ಪ್ರಕರಣದಿಂದ ಖುಲಾಸೆಗೊಳಿಸಿದೆ.
ಹೈಕೋರ್ಟ್ಗೆ ಮೇಲ್ಮನವಿ: ವಿಚಾರಣಾ ನ್ಯಾಯಾಲಯದ ಈ ಆದೇಶದ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಸಿಬಿಐ ಶುಕ್ರವಾರ ಮೇಲ್ಮನವಿ ಸಲ್ಲಿಸಿದೆ. ವಿಚಾರಣಾ ನ್ಯಾಯಾಲಯವು ತನಿಖೆಯ ಹಲವಾರು ಅಂಶಗಳನ್ನು ನಿರ್ಲಕ್ಷಿಸಿದೆ ಅಥವಾ ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ಸಿಬಿಐನ ವಕ್ತಾರರು ತಿಳಿಸಿದ್ದಾರೆ.
- ನಕಲಿ ಅಬಕಾರಿ ನೀತಿ ಪ್ರಕರಣದ ಮೂಲಕ ನನ್ನ ಪ್ರಾಮಾಣಿಕತೆ ಮತ್ತು ಪ್ರತಿಷ್ಠೆಯ ಮೇಲೆ ದಾಳಿ ನಡೆಸಲಾಯಿತುಅರವಿಂದ ಕೇಜ್ರಿವಾಲ್, ಎಎಪಿ ಮುಖ್ಯಸ್ಥ
ದೆಹಲಿ ಅಬಕಾರಿ ನೀತಿ ಪ್ರಕರಣವು ಸುಳ್ಳಿನ ಜಾಲವಾಗಿತ್ತು. ನ್ಯಾಯಾಂಗ ಅದನ್ನು ಭೇದಿಸಿದೆ. ಸತ್ಯಮೇವ ಜಯತೇಕೆ. ಕವಿತಾ, ತೆಲಂಗಾಣ ಜಾಗೃತಿ ಅಧ್ಯಕ್ಷೆ
ಕೇಜ್ರಿವಾಲ್ ಸಿಸೋಡಿಯಾ ಅವರ ಖುಲಾಸೆಯು ಗುಜರಾತ್ ಚುನಾವಣೆ ಸಮೀಪಿಸುತ್ತಿರುವ ಕಾರಣ ನಡೆದಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆದೇವೇಂದರ್ ಯಾದವ್, ದೆಹಲಿ ಕಾಂಗ್ರೆಸ್ ಮುಖ್ಯಸ್ಥ
ನವದೆಹಲಿ: ‘ನಮ್ಮ ವಿರುದ್ಧದ ಈ ಭ್ರಷ್ಟಾಚಾರ ಪ್ರಕರಣವು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡ ರಾಜಕೀಯ ಪಿತೂರಿಯಾಗಿದೆ’ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಪ್ರತಿಪಾದಿಸಿದರು. ದೆಹಲಿ ಅಬಕಾರಿ ನೀತಿ ಪ್ರಕರಣದಿಂದ ಖುಲಾಸೆಗೊಂಡ ಆದೇಶ ಹೊರಬಿದ್ದ ಕೂಡಲೇ ಕೋರ್ಟ್ನಿಂದ ಹೊರಬಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಈ ವೇಳೆ ಭಾವನಾತ್ಮಕವಾಗಿ ಮಾತನಾಡಿದ ಅವರು ಕಣ್ಣೀರು ಹಾಕಿದರು. ‘ನಾನು ಸಿಸೋಡಿಯಾ ಮತ್ತು ಎಎಪಿ ಪಕ್ಷದವರು ಪೂರ್ಣ ಪ್ರಾಮಾಣಿಕರು ಎಂಬುದು ನ್ಯಾಯಾಲಯದ ಈ ಆದೇಶದಿಂದ ಸ್ಪಷ್ಟವಾಗುತ್ತದೆ’ ಎಂದರು.
‘ಅಬಕಾರಿ ನೀತಿ ಪ್ರಕರಣದ ಮೂಲಕ ಎಎಪಿಯನ್ನು ಮುಗಿಸಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಿತೂರಿ ರೂಪಿಸಿದ್ದರು’ ಎಂದು ಕೇಜ್ರಿವಾಲ್ ಆರೋಪಿಸಿದರು.
‘ಮೋದಿ ಮತ್ತು ಅಮಿತ್ ಶಾ ಅವರು ಒಟ್ಟಾಗಿ ಸ್ವತಂತ್ರ ಭಾರತದ ಅತಿದೊಡ್ಡ ರಾಜಕೀಯ ಪಿತೂರಿಯನ್ನು ರೂಪಿಸಿದರು. ಎಎಪಿ ಮುಗಿಸಲು ಪಕ್ಷದ ಐವರು ಹಿರಿಯ ನಾಯಕರನ್ನು ಜೈಲಿಗಟ್ಟಿದರು. ಆದರೆ ದೇವರು ನಮ್ಮೊಂದಿಗಿದ್ದಾನೆ ಎಂದು ನಾನು ಯಾವಾಗಲೂ ಹೇಳುತ್ತಿದ್ದೆ’ ಎಂದು ಅವರು ಸ್ಮರಿಸಿದರು.
‘ಹಾಲಿ ಮುಖ್ಯಮಂತ್ರಿಯನ್ನು ಮನೆಯಿಂದ ಜೈಲಿಗೆ ಎಳೆದೊಯ್ದದ್ದು ಇದೇ ಮೊದಲು’ ಎಂದ ಅವರು ‘ನಮ್ಮ ವಿರುದ್ಧ ಅಪಪ್ರಚಾರ ಮಾಡಲಾಯಿತು. ಸುದ್ದಿ ವಾಹಿನಿಗಳಲ್ಲಿ ದಿನದ 24 ಗಂಟೆಯೂ ಈ ಬಗ್ಗೆ ಚರ್ಚೆಗಳು ನಡೆದವು’ ಎಂದು ಬೇಸರ ವ್ಯಕ್ತಪಡಿಸಿದರು.
ನವದೆಹಲಿ: ಸಾಕ್ಷ್ಯಾಧಾರಗಳ ಕೊರತೆ ಎಂದು ಹೇಳಿ ನ್ಯಾಯಾಲಯ ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಖುಲಾಸೆಗೊಳಿಸಿರಬಹುದು. ಆದರೆ ದೇಶದ ರಾಜಧಾನಿಯ ಜನರು ಈಗಾಗಲೇ ಅವರಿಗೆ ರಾಜಕೀಯ ಪ್ರತಿಕ್ರಿಯೆ ನೀಡಿದ್ದಾರೆ ಎಂದು ಬಿಜೆಪಿ ಶುಕ್ರವಾರ ಹೇಳಿದೆ. ಕೋರ್ಟ್ ಆದೇಶವನ್ನು ಪೂರ್ಣವಾಗಿ ಪರಿಶೀಲಿಸಿದ ಬಳಿಕವಷ್ಟೇ ಪಕ್ಷ ಪ್ರತಿಕ್ರಿಯೆ ನೀಡಲಿದೆ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.