ADVERTISEMENT

ದೆಹಲಿಯಲ್ಲಿ ಲಾಕ್‌ಡೌನ್ ಸಡಿಲಿಕೆ: ಸಮ–ಬೆಸ ಸಂಖ್ಯೆಯಲ್ಲಿ ತೆರೆಯಲು ಅವಕಾಶ

ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಪ್ರಕಟಣೆ

ಪಿಟಿಐ
Published 5 ಜೂನ್ 2021, 8:43 IST
Last Updated 5 ಜೂನ್ 2021, 8:43 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸೋಮವಾರದಿಂದ ಹಂತ ಹಂತವಾಗಿ ಲಾಕ್‌ಡೌನ್ ತೆರವುಗೊಳಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ತಿಳಿಸಿದರು.

ಆನ್‌ಲೈನ್‌ನಲ್ಲಿ ನಡೆದ ‌ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿರ್ಬಂಧ ಸಡಿಲಗೊಳಿಸಿ ಹೊರಡಿಸಿರುವ ಆದೇಶ ಸೋಮವಾರದಿಂದ ಜಾರಿಗೆ ಬರಲಿದೆ. ಆ ಪ್ರಕಾರ, ಶೇ 50ರ ಪ್ರಯಾಣಿಕರೊಂದಿಗೆ ಮೆಟ್ರೊ ರೈಲು ಸಂಚಾರ ಮಾಡಲಿದೆ. ಸರಿ–ಬೆಸ ಸಂಖ್ಯೆಯ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್‌ಗಳು ತೆರೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ ಎಂದು ತಿಳಿಸಿದರು.

ಸೋಮವಾರ ಬೆಳಿಗ್ಗೆ 5 ಗಂಟೆಗೆ ಕೊನೆಗೊಳ್ಳಬೇಕಿದ್ದ ದೆಹಲಿಯ ಲಾಕ್‌ಡೌನ್ ಅನ್ನು ಕೆಲವೊಂದು ನಿಯಮಗಳನ್ನು ಸಡಿಸಲಿಸುವುದರೊಂದಿಗೆ ವಿಸ್ತರಿಸಲಾಗುವುದು ಎಂದು ಕೇಜ್ರಿವಾಲ್ ಹೇಳಿದರು.

ADVERTISEMENT

‘ಶೇ 50ರಷ್ಟು ಹಾಜರಾತಿಯೊಂದಿಗೆ ಸರ್ಕಾರಿ ಮತ್ತು ಖಾಸಗಿ ಕಚೇರಿಗಳನ್ನು ತೆರಯಲು ಅವಕಾಶ ನೀಡಲಾಗುವುದು. ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ಬೆಸ-ಸಮ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್‌ಗಳನ್ನು ತೆರೆಯಲು ಅವಕಾಶ ನೀಡಲಾಗುವುದು‘ ಎಂದು ಅವರು ವಿವರಿಸಿದರು.

ನಿತ್ಯ 37 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಜತೆಗೆ, ದೆಹಲಿಯ ಆಸ್ಪತ್ರೆಯಲ್ಲಿರುವ ಐಸಿಯುಗಳ ಲಭ್ಯತೆ ಮತ್ತು ಔಷಧಗಳ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ದೆಹಲಿ ಸರ್ಕಾರ ಕೊರೊನಾ ಮೂರನೇ ಅಲೆ ಎದುರಿಸಲು ದೆಹಲಿ ಸರ್ಕಾರ ಸಜ್ಜಾಗುತ್ತಿದೆ ಎಂದು ಹೇಳಿದರು.

‘ಮೂರನೇ ಅಲೆಯಲ್ಲಿ ಮಕ್ಕಳಿಗೆ ತೊಂದರೆಯಾಗಬಹುದೆಂಬ ತಜ್ಞರ ಹೇಳಿಕೆಗಳ ಹಿನ್ನೆಲೆಯಲ್ಲಿ, ಮಕ್ಕಳಿಗೆ ಅಗತ್ಯವಿರುವ ಹಾಸಿಗೆಗಳು, ಐಸಿಯು ಸೌಲಭ್ಯಗಳು ಮತ್ತು ಇತರ ಉಪಕರಣಗಳ ವ್ಯವಸ್ಥೆಗಾಗಿ ‘ಮಕ್ಕಳ ಕಾರ್ಯಪಡೆ‘ ರಚಿಸಲಾಗಿದೆ‘ ಎಂದು ಅವರು ಮಾಹಿತಿ ನೀಡಿದರು.

ದೆಹಲಿಯಲ್ಲಿ 450 ಮೆಟ್ರಿಕ್ ಟನ್ ಆಮ್ಲಜನಕ ಸಂಗ್ರಹಿವಷ್ಟು ಸಾಮರ್ಥ್ಯವನ್ನು ಹೆಚ್ಚಿಸಲಾಗುತ್ತಿದೆ. 25 ಆಮ್ಲಜನಕ ಟ್ಯಾಂಕರ್‌ಗಳನ್ನು ಸರ್ಕಾರ ಖರೀದಿಸುತ್ತಿದೆ. 64 ಸಣ್ಣ ಆಮ್ಲಜನಕ ಘಟಕಗಳನ್ನು ಸ್ಥಾಪಿಸುತ್ತಿದೆ. ಕೋವಿಡ್‌ಗೆ ಚಿಕಿತ್ಸೆಗೆ ಸಂಬಂಧಿಸಿದ ಔಷಧಿಗಳ ದಾಸ್ತಾನು ಮಾಡುವುದಕ್ಕೂ ಗಮನ ಹರಿಸಲಾಗುವುದು ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.