ನವದೆಹಲಿ: ಇಲ್ಲಿನ ರೈಲು ನಿಲ್ದಾಣದಲ್ಲಿ ಫೆಬ್ರುವರಿ 15ರಂದು 18 ಜನರನ್ನು ಬಲಿ ಪಡೆದ ಕಾಲ್ತುಳಿತ ಘಟನೆಗೆ, ಪ್ರಯಾಣಿಕರೊಬ್ಬರ ತಲೆಯ ಮೇಲಿನಿಂದ ದೊಡ್ಡ ಬ್ಯಾಗ್, ಸಹ ಪ್ರಯಾಣಿಕರ ಮೇಲೆ ಉರುಳಿಬಿದ್ದದ್ದೇ ಕಾರಣ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ರಾಜ್ಯಸಭೆಗೆ ತಿಳಿಸಿದ್ದಾರೆ.
ದೆಹಲಿ ರೈಲು ನಿಲ್ದಾಣದ ಕಾಲ್ತುಳಿತ ಘಟನೆಯ ತನಿಖೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದ ರಾಮ್ಜಿ ಲಾಲ್ ಸುಮನ್ ಅವರು ಕೇಳಿದ ಪ್ರಶ್ನೆಗೆ ವೈಷ್ಣವ್ ಲಿಖಿತ ಉತ್ತರ ನೀಡಿದ್ದಾರೆ.
ಪ್ಲಾಟ್ಫಾರ್ಮ್ 14 ಮತ್ತು 15 ಸಂಪರ್ಕಿಸುವ ಸೇತುವೆ –3ರ ಮೆಟ್ಟಿಲುಗಳ ಮೇಲೆ ಅಂದು ರಾತ್ರಿ 8.15ರ ಸುಮಾರಿಗೆ ಘಟನೆ ನಡೆದಿದೆ. ಪ್ರಯಾಗರಾಜ್ ಕುಂಭಮೇಳಕ್ಕೆ ಹೋಗಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಪ್ರಯಾಣಿಕರೊಬ್ಬರು ಹೊತ್ತುಕೊಂಡಿದ್ದ ಬ್ಯಾಗ್ ಉರುಳಿ ಸಹ ಪ್ರಯಾಣಿರ ಮೇಲೆ ಬಿತ್ತು. ಇದರಿಂದ ಮೆಟ್ಟಿಲುಗಳ ಮೇಲೆ ನಿಂತಿದ್ದವರು ಆಯತಪ್ಪಿ ಒಬ್ಬರ ಮೇಲೊಬ್ಬರು ಬಿದ್ದರು. ಏಕಾಏಕಿ ನೂಕುನುಗ್ಗಲು ಉಂಟಾಗಿದ್ದು ಕಾಲ್ತುಳಿತಕ್ಕೆ ಕಾರಣವಾಯಿತು ಎಂದು ಅವರು ಹೇಳಿದ್ದಾರೆ.
ರೈಲು ನಿಲ್ದಾಣದಲ್ಲಿ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಬೇಕಿದ್ದ ಎಲ್ಲ ಶಿಷ್ಟಾಚಾರಗಳನ್ನು ಪಾಲಿಸಲಾಗಿತ್ತು ಎಂದಿರುವ ವೈಷ್ಣವ್, ‘ಘಟನೆ ನಡೆದ ದಿನ ಕುಂಭಮೇಳಕ್ಕೆ ತೆರಳಲು 49 ಸಾವಿರ ಪ್ರಯಾಣಿಕರು ಟಿಕೆಟ್ ಖರೀದಿಸಿದ್ದರು. ಇದು ಇತರೆ ದಿನಗಳ ಪ್ರಯಾಣಿಕರ ಸರಾಸರಿ ಸಂಖ್ಯೆಗೆ ಹೋಲಿಸಿದರೆ 13 ಸಾವಿರದಷ್ಟು ಹೆಚ್ಚಿತ್ತು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.