ಪಟ್ನಾ(ಬಿಹಾರ): ಹಣ ಪಡೆದುಕೊಂಡು ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಆರೋಪಿಸಿರುವ ಆರ್ಜೆಡಿ ಪಕ್ಷದ ಟಿಕೆಟ್ ಆಕಾಂಕ್ಷಿಯೊಬ್ಬರು, ಪಕ್ಷದ ಅಧ್ಯಕ್ಷ ಲಾಲೂ ಪ್ರಸಾದ್ ಅವರ ನಿವಾಸ ಮುಂದೆ ಬಟ್ಟೆ ಹರಿದುಕೊಂಡು, ರಸ್ತೆಯಲ್ಲಿ ಉರುಳಾಡಿ ಕಣ್ನೀರಿಟ್ಟಿದ್ದಾರೆ.
ಮದನ್ ಸಾಹ್ ಅವರು ಆರ್ಜೆಡಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದರು. 2020ರಲ್ಲಿ ಆರ್ಜೆಡಿ ಟಿಕೆಟ್ನಿಂದ ಮಧುಬನ್ ಕ್ಷೇತ್ರದಿಂದ ಸ್ಪರ್ಧಿಸಿ ಅಲ್ಪ ಅಂತರದಿಂದ ಸೋತಿದ್ದರು. ಈ ಬಾರಿಯೂ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲಿದ್ದ ಅವರಿಗೆ ಪಕ್ಷವು ಟಿಕೆಟ್ ನಿರಾಕರಿಸಿದೆ. ಸುದೀರ್ಘ ಕಾಲ ಪಕ್ಷದ ಕೆಲಸ ಮಾಡಿದ ತಮಗೆ ಟಿಕೆಟ್ ನಿರಾಕರಿಸಿರುವುದು ಸರಿಯಲ್ಲ ಎಂದು ಸಾಹ್ ಅವರು ಅವಲತ್ತುಕೊಂಡಿದ್ದಾರೆ.
‘ಟಿಕೆಟ್ಗಾಗಿ ನನ್ನ ಬಳಿ ₹2.70 ಕೋಟಿ ಕೇಳಿದ್ದರು. ನನ್ನ ಮಕ್ಕಳ ಮದುವೆಯನ್ನು ಮುಂದೂಡುವ ಮೂಲಕ ಹಣ ಹೊಂದಿಸಿದ್ದೆ. ಈಗ ಎಲ್ಲವೂ ಮುಗಿದಿದೆ. ಕನಿಷ್ಠ ಪಕ್ಷ ಅವರು ನನ್ನ ಹಣವನ್ನು ಹಿಂದಿರುಗಿಸಬೇಕು’ ಎಂದು ಮಾಧ್ಯಮಗಳ ಮುಂದೆ ಸಾಹ್ ಆರೋಪಿಸಿದ್ದಾರೆ.
ಸಾಹ್ ಅವರ ಆರೋಪ ಕುರಿತಂತೆ ಆರ್ಜೆಡಿ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ನಾಮಪತ್ರ ಸಲ್ಲಿಕೆಗೆ ಸೋಮವಾರ ಕೊನೆಯ ದಿನವಾಗಿದೆ. ಮಧುಬನ್ ಕ್ಷೇತ್ರದಿಂದ ಆರ್ಜೆಡಿ ಸ್ಪರ್ಧಿಸಲಿದೆಯೇ? ಅಥವಾ ಅದರ ಮಿತ್ರಪಕ್ಷಗಳು ಸ್ಪರ್ಧಿಸುತ್ತವೆಯೇ? ಎಂಬುದು ಇನ್ನು ಸ್ಪಷ್ಟವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.