ನವದೆಹಲಿ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ಬಗ್ಗೆ ತಾರತಮ್ಯ ಧೋರಣೆ ಅನುಸರಿಸಬಾರದು ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ(ಯುಜಿಸಿ) ವಿಶ್ವವಿದ್ಯಾಲಯಗಳಿಗೆ ಮತ್ತು ಇತರ ಉನ್ನತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗೆ ಸೂಚಿಸಿದೆ.
ವಿಶ್ವವಿದ್ಯಾಲಯಗಳು ತಮ್ಮ ವೆಬ್ಸೈಟ್ನಲ್ಲಿ ಇಂತಹ ದೌರ್ಜನ್ಯಗಳ ಕುರಿತು ದೂರು ಸಲ್ಲಿಸುವ ಪುಟವೊಂದನ್ನು ತೆರೆಯಬೇಕು. ಅಂತಹ ದೂರುಗಳನ್ನು ಗಮನಿಸಿ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಯುಜಿಸಿ ಸೂಚಿಸಿದೆ.
ಯಾವುದೇ ಸಮುದಾಯ ಅಥವಾ ವರ್ಗದ ವಿದ್ಯಾರ್ಥಿಗಳಿಗೆ ತಾರತಮ್ಯ ಮಾಡುವ ಕೆಲಸದಲ್ಲಿ ಸಿಬ್ಬಂದಿ ಭಾಗಿಯಾಗದಂತೆ ವಿಶ್ವವಿದ್ಯಾಲಯ ಅಥವಾ ಕಾಲೇಜುಗಳು ನೋಡಿಕೊಳ್ಳಬೇಕು. ಸಾಮಾಜಿಕ ಹಿನ್ನೆಲೆಯನ್ನು ಆಧರಿಸಿ ಪರಿಶಿಷ್ಟ ಜಾತಿ ಅಥವಾ ಪಂಗಡದ ವಿದ್ಯಾರ್ಥಿಗಳಿಗೆ ಶೋಷಣೆ ಆಗಬಾರದು ಎಂದು ಯುಜಿಸಿ ಕಾರ್ಯದರ್ಶಿ ರಜನೀಶ್ ಜೈನ್ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.
ಸಿಬ್ಬಂದಿ ತಾರತಮ್ಯ ಮಾಡಿರುವುದು ಸಾಬೀತಾದಲ್ಲಿ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು. ಇಂತಹ ದೂರುಗಳನ್ನು ಪರಿಶೀಲಿಸಲು ವಿಶ್ವವಿದ್ಯಾಲಯಗಳು ಸಮಿತಿಯನ್ನು ರಚಿಸಬಹುದು. ಇಂತಹ ಪ್ರಕರಣಗಳನ್ನು ಅತಿ ಸೂಕ್ಷ್ಮವಾಗಿ ಅಧಿಕಾರಿಗಳು ನಿರ್ವಹಿಸಬೇಕು, ಕ್ರಮ ತೆಗೆದುಕೊಂಡಿರುವ ಕುರಿತ ವರದಿಯನ್ನು 30 ದಿನಗಳ ಒಳಗೆ ಯುಜಿಸಿಗೆ ಕಳುಹಿಸಬೇಕು ಎಂದು ಜೈನ್ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.