ನವದೆಹಲಿ: ‘ಮಧ್ಯಪ್ರಾಚ್ಯ ಪ್ರದೇಶದ ವಾಯು ಪ್ರದೇಶದಲ್ಲಿ ಜಾಗತಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆ (ಜಿಎನ್ಎಸ್ಎಸ್) ನಿಷ್ಕ್ರಿಯೆಗೊಳ್ಳುತ್ತಿರುವ ಹಾಗೂ ವಂಚಿಸುತ್ತಿರುವ ಕುರಿತು ವರದಿಗಳಾಗುತ್ತಿದೆ. ಇದರಿಂದ ವಿಮಾನಗಳು ಕುರುಡಾಗಿ ಹಾರಾಟ ನಡೆಸುವ ಸ್ಥಿತಿ ನಿರ್ಮಾಣವಾಗಿದೆ’ ಎಂದಿರುವ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (ಡಿಜಿಸಿಎ) ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಹಾಗೂ ಪ್ರಮುಖ ವಿಮಾನಯಾನ ಸಂಸ್ಥೆಗಳಿಗೆ ಎಚ್ಚರಿಕೆ ವಹಿಸುವಂತೆ ಸುತ್ತೋಲೆ ಹೊರಡಿಸಿದೆ.
ಎದುರಾಗಿರುವ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳುವಂತೆ ವಿಮಾನ ನಿರ್ವಹಣೆ ಮಾಡುವವರಿಗೆ, ಪೈಲೆಟ್ಗಳಿಗೆ ಹಾಗೂ ವಾಯುಯಾನ ದಿಕ್ಸೂಚಿ ಸೇವಾ ಪೂರೈಕೆದಾರರಿಗೆ ಹಾಗೂ ವಾಯು ಸಂಚಾರ ನಿಯಂತ್ರಿಕರಿಗೆ ಸುತ್ತೋಲೆಯಲ್ಲಿ ಹೇಳಲಾಗಿದೆ. ಸುರಕ್ಷಿತ ವಾಯುಯಾನಕ್ಕೆ ಅನುಕೂಲವಾಗುವ ಸಾಧನಗಳ ತಯಾರಕರು ಮತ್ತು ಅವುಗಳ ನಿರ್ವಹಿಸುವವರೊಂದಿಗೆ ಸಮನ್ವಯ ಸಾಧಿಸುವಂತೆ ಹೇಳಲಾಗಿದೆ.
‘ಜಿಎನ್ಎಸ್ಎಸ್ ನಿಷ್ಕ್ರಿಯೆಗೊಳ್ಳುವ ಹಾಗೂ ವಂಚಿಸುವ ಅಪಾಯಗಳ ಕುರಿತು ಎಚ್ಚರ ಅಗತ್ಯ. ಹಲವು ಭೂಪ್ರದೇಶಗಳಲ್ಲಿ ಇಂಥ ಘಟನೆಗಳು ಸಂಭವಿಸುತ್ತಿರುವುದು ಪತ್ತೆಯಾಗಿದೆ. ವಿಮಾನಗಳಿಗೆ ತಪ್ಪು ಸಂದೇಶ ನೀಡುವ ಮೂಲಕ ನ್ಯಾವಿಗೇಷನ್ ವ್ಯವಸ್ಥೆಯನ್ನೇ ಬದಲಿಸುವ ಯತ್ನವಾಗಿದೆ. ಇದು ಇತ್ತೀಚಿನ ದಿನಗಳಲ್ಲಿ ಮಧ್ಯಪ್ರಾಚ್ಯದ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದು ವಿಮಾನ ಹಾಗೂ ಭೂಮಿ ಮೇಲಿರುವ ನಿಯಂತ್ರಣ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತಿದೆ’ ಎಂದು ಡಿಜಿಸಿಎ ಹೇಳಿದೆ.
ಇದಕ್ಕಾಗಿಯೇ ಸಮಿತಿ ರಚಿಸಿರುವ ಡಿಜಿಸಿಎ, ಜಾಗತಿಕ ಮಟ್ಟದ ಪರಿಣಿತರೊಂದಿಗೆ ಚರ್ಚಿಸಲು ನಿರ್ಧಾರ ತೆಗೆದುಕೊಂಡಿದೆ. ಜತೆಗೆ ಸದ್ಯ ಇರುವ ವಾಯುಯಾನ ಮಾರ್ಗಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದೆ. ಇದಕ್ಕಾಗಿ ಕಾರ್ಯಯೋಜನೆ ಸಿದ್ಧಪಡಿಸುವ ಸಲಹೆಯನ್ನೂ ನೀಡಿದೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.