ನವದೆಹಲಿ: ಪಕ್ಷಗಳ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಟನಾದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಪಕ್ಷಗಳ ಜಂಟಿ ಸಭೆಯ ಸ್ಥಳ ಹಾಗೂ ದಿನಾಂಕ ಘೋಷಣೆಗೆ ವಿಳಂಬವಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಸ್ಥಳ ಹಾಗೂ ದಿನಾಂಕ ಅಂತಿಮಗೊಳ್ಳುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಹಾಗೂ ಜೆಡಿಯು ನಾಯಕರು ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಾರಥ್ಯದಲ್ಲಿ ಪಟನಾದಲ್ಲಿ ವಿಪಕ್ಷಗಳ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಕಾಂಗ್ರೆಸೇತರ ವಿಪಕ್ಷಗಳ ಮೈತ್ರಿಗೆ ಒಲವು ತೋರಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯೂ ಆಗಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ನಿತೀಶ್ ಕುಮಾರ್ ಅವರೇ ಸಭೆಯ ಮುಂದಾಳತ್ವ ವಹಿಸಬೇಕು ಎಂದು ಹೇಳಿದ್ದಾರೆ.
ಆದರೆ ನಿತೀಶ್ ಕುಮಾರ್ ಅವರನ್ನು ವಿಪಕ್ಷ ಒಕ್ಕೂಟದ ನೇತಾರ ಎಂದು ಬಿಂಬಿಸುವುದಕ್ಕೆ ಕೆಲವು ಪಕ್ಷಗಳಿಂದ ಆಕ್ಷೇಪಣೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ವಿಪಕ್ಷಗಳ ಒಗ್ಗಟ್ಟಿನ ಸಭೆಗೆ ನಿತೀಶ್ ಕುಮಾರ್ ಮುಂದಾಳತ್ವ ವಹಿಸುವುದು ಹಾಗೂ ಅವರನ್ನು ವಿಪಕ್ಷ ಒಕ್ಕೂಟದ ಸಂಚಾಲಕ ಎಂದು ಬಿಂಬಿಸುವುದಕ್ಕೂ ಕೆಲವು ಪಕ್ಷಗಳ ವಿರೋಧ ಇದೆ.
ವಿಪಕ್ಷಗಳ ಒಗ್ಗಟ್ಟು ವಿಳಂಬವಾಗಬಾರದು ಎನ್ನುವ ಕಾರಣಕ್ಕೆ, ಸಭೆ ಎಲ್ಲಿ ನಡೆಯಬೇಕು ಎನ್ನುವುದರ ಬಗ್ಗೆ ಕಾಂಗ್ರೆಸ್ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಆದರೆ ಕಾಂಗ್ರೆಸ್ ಪರ ಇರುವ ಕೆಲ ಪಕ್ಷಗಳು, ಈ ಸಭೆ ದೆಹಲಿಯಲ್ಲಿ ನಡೆಯಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.
ಸಭೆ ಎಲ್ಲಿ ನಡೆಯಬೇಕು ಎನ್ನುವ ಬಗ್ಗೆ ಅನಧಿಕೃತ ಮಾತುಕತೆಗಳು ನಡೆದಿವೆ. ಆದರೆ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎನ್ನಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.