ADVERTISEMENT

ಡಿಜಿಟಲೀಕರಣವು ಸೇವೆಗಳಲ್ಲಿ ಪಾರದರ್ಶಕತೆಯನ್ನು ತರುತ್ತದೆ: ಮನೋಹರ್ ಲಾಲ್ ಖಟ್ಟರ್

ಪಿಟಿಐ
Published 1 ಸೆಪ್ಟೆಂಬರ್ 2021, 14:35 IST
Last Updated 1 ಸೆಪ್ಟೆಂಬರ್ 2021, 14:35 IST
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್    

ಚಂಡೀಗಡ: ಡಿಜಿಟಲೀಕರಣವು ಕೆಲಸವನ್ನು ತ್ವರಿತವಾಗಿ ನಿರ್ವಹಿಸಲು ಸಹಾಯ ಮಾಡುವುದಲ್ಲದೆ ಸೇವೆಗಳಲ್ಲಿ ಹೆಚ್ಚು ಪಾರದರ್ಶಕತೆಯನ್ನು ತಂದಿದೆ. ಇತ್ತೀಚಿನ ದಿನಗಳಲ್ಲಿ ITಯ ಸರಿಯಾದ ವ್ಯಾಖ್ಯಾನವೆಂದರೆ 'ತಕ್ಷಣದ ಪರಿವರ್ತನೆ' (Immediate Transformation) ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಬುಧವಾರ ತಿಳಿಸಿದರು.

ಒಂದು ಕ್ಲಿಕ್ ಮೂಲಕ ಅರ್ಹ ಜನರ ಮನೆಬಾಗಿಲಿಗೆ ಅಧಿಸೂಚಿತ ಸೇವೆಗಳನ್ನು ತರುವ ಗುರಿಯನ್ನು ಹೊಂದಿರುವ ರಾಜ್ಯ ಸರ್ಕಾರದ ಯೋಜನೆ 'ಆಟೋ ಅಪೀಲ್ ಸಾಫ್ಟ್‌ವೇರ್' ಅನ್ನು ಉದ್ಘಾಟಿಸುವ ವೇಳೆ ಮುಖ್ಯಮಂತ್ರಿಗಳು ಮಾತನಾಡಿದರು. ಎಎಎಸ್ ಹರಿಯಾಣ ಸೇವಾ ಹಕ್ಕು ಆಯೋಗ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಜಂಟಿ ಯೋಜನೆಯಾಗಿದೆ.

'ಸರ್ಕಾರಿ ಸೇವೆಗಳ ಪ್ರಯೋಜನಗಳನ್ನು ಒದಗಿಸಲು ಮತ್ತು ಅರ್ಹ ಜನರ ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸಲು ಆರಂಭಿಸಲಾಗಿರುವ ಈ ಸಾಫ್ಟ್‌ವೇರ್, ಸರ್ಕಾರಿ ಸೇವೆಗಳನ್ನು ಸಕಾಲದಲ್ಲಿ ತಲುಪಿಸುವಲ್ಲಿ ಒಂದು ಮೈಲಿಗಲ್ಲು ಎಂಬುದನ್ನು ಸಾಬೀತುಪಡಿಸುತ್ತದೆ. ಈ ಆ್ಯಪ್‌ನ ಆರಂಭವು ಜನರಿಗೆ ಭರವಸೆ ಉಂಟುಮಾಡಿದೆ. ನಾವು ಈ ಭರವಸೆಯನ್ನು ವಾಸ್ತವಕ್ಕೆ ಪರಿವರ್ತಿಸಬೇಕು. ಎಲ್ಲಾ ಸೇವೆಗಳು ಆನ್‌ಲೈನ್ ಮೂಲಕ ದೊರಕುವಂತೆ ಮಾಡಿದಾಗ ಮಾತ್ರ ಜನರ ಈ ಭರವಸೆ ಈಡೇರುತ್ತದೆ ಎಂದು ಹೇಳಿದರು.

ADVERTISEMENT

ಸದ್ಯ, 31 ಇಲಾಖೆಗಳ 546 ಅಧಿಸೂಚಿತ ಸೇವೆಗಳಲ್ಲಿ 277 ಸೇವೆಗಳನ್ನು ಅಂತ್ಯೋದಯ ಸರಳ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಒದಗಿಸಲಾಗಿದ್ದು, 269 ಸೇವೆಗಳನ್ನು ಆಫ್‌ಲೈನ್‌ ಮೂಲಕ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.

ಉಳಿದ ಸೇವೆಗಳನ್ನು ಕೂಡ ಆದಷ್ಟು ಬೇಗ ಆನ್‌ಲೈನ್‌ನಲ್ಲಿ ದೊರಕುವಂತೆ ಮಾಡಬೇಕೆಂದು ಅವರು ವಿವಿಧ ಇಲಾಖೆಗಳ ಆಡಳಿತ ಕಾರ್ಯದರ್ಶಿಗಳಿಗೆ ನಿರ್ದೇಶನ ನೀಡಿದರು. ಅಕ್ಟೋಬರ್ 2014 ರಲ್ಲಿ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ, ಮುಖ್ಯಮಂತ್ರಿ, ಮಂತ್ರಿಗಳು ಮತ್ತು ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಯ ಹೊರಗೆ ಜನರ ಸರತಿ ಸಾಲು ಇರುತ್ತಿತ್ತು ಎಂದು ಖಟ್ಟರ್ ನೆನಪಿಸಿಕೊಂಡರು.

'ಅವರು ಪ್ರತಿ ಸಣ್ಣ ಅಥವಾ ದೊಡ್ಡ ಕೆಲಸಕ್ಕಾಗಿ ರಾಜ್ಯದ ರಾಜಧಾನಿಗೆ ಬರಬೇಕಿತ್ತು. ಇದನ್ನೆಲ್ಲ ನೋಡಿ ನನಗೆ ತುಂಬಾ ನೋವಾಗುತ್ತಿತ್ತು ಮತ್ತು ಜನರು ತಮ್ಮ ಕೆಲಸಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಏಕೆ ಹೋಗಬೇಕು, ಮನೆಯಲ್ಲಿ ಕುಳಿತುಕೊಂಡೇ ಇದನ್ನ ಮಾಡಬಹುದೆಂದು ನಾನು ಆಗಾಗ್ಗೆ ಯೋಚಿಸುತ್ತಿದ್ದೆ' ಎಂದು ಅವರು ಹೇಳಿದರು.

'ಅಧಿಕಾರ ವಹಿಸಿಕೊಂಡ ಒಂದೂವರೆ ತಿಂಗಳಲ್ಲಿ, ಸರ್ಕಾರವು 'ಸಿಎಂ ವಿಂಡೋ' ಪೋರ್ಟಲ್ ಅನ್ನು ಪ್ರಾರಂಭಿಸಿತು. ಈ ಮೂಲಕ ಸಾಮಾನ್ಯ ಜನರಿಗೆ ಮನೆಯಲ್ಲಿ ಕುಳಿತು ದೂರುಗಳನ್ನು ನೀಡಲು ಅಧಿಕಾರ ನೀಡಿತು. ಇದುವರೆಗೆ ಸುಮಾರು 9 ಲಕ್ಷ ದೂರುಗಳು ದಾಖಲಾಗಿದ್ದು, ಈ ಪೈಕಿ 8.25 ಲಕ್ಷ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.