
ಪನ್ನೀರಸೆಲ್ವಂ
ಚೆನ್ನೈ: ‘ಆಡಳಿತಾರೂಢ ಡಿಎಂಕೆ ಪಕ್ಷವೇ 2026 ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಪುನಃ ಅಧಿಕಾರಕ್ಕೆ ಬರಲಿದೆ‘ ಎಂದು ಎಐಎಡಿಎಂಕೆ ಪಕ್ಷದ ಉಚ್ಚಾಟಿತ ನಾಯಕ ಓ. ಪನ್ನೀರಸೆಲ್ವಂ ಭರವಸೆ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಎಐಎಡಿಎಂಕೆಯಿಂದ ಉಚ್ಚಾಟನೆಗೆ ಒಳಗಾಗಿರುವ, ಮಾಜಿ ಮುಖ್ಯಮಂತ್ರಿಯೂ ಆಗಿರುವ ಪನ್ನೀರಸೆಲ್ವಂ ಅವರು ಇಂದು ಸಚಿವಾಲಯದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾಗಿ ಅಚ್ಚರಿ ಮೂಡಿಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಎಂ.ಕೆ. ಸ್ಟಾಲಿನ್ ಸಿಎಂ ಆಗಿ ಯಶಸ್ವಿಯಾಗಿ 5 ವರ್ಷ ಪೂರೈಸುತ್ತಿರುವುದರಿಂದ ಅವರನ್ನು ಭೇಟಿಯಾಗಿ ಅಭಿನಂದನೆ ತಿಳಿಸಿದ್ದೇನೆ’ ಎಂದು ವಿವರಿಸಿದರು.
‘ಎಐಎಡಿಎಂಕೆ ಕೆಲ ಶಾಸಕರು ಸಹ ಎಂ.ಕೆ. ಸ್ಟಾಲಿನ್ ಅವರನ್ನು ಸಮರ್ಥಿಸಿಕೊಂಡಿರುವರಲ್ಲ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಜನಗಳ ಮನದಲ್ಲಿ ಏನಿದೆಯೋ ಅದನ್ನೇ ಅವರು ಹೇಳಿದ್ದಾರೆ’ ಎಂದು ಸ್ಪಷ್ಟಪಡಿಸಿದರು.
‘ಸತತ ಎರಡನೇ ಭಾರಿಗೆ ಡಿಎಂಕೆ ಸರ್ಕಾರ ರಚಿಸುವುದು ಪಕ್ಕಾ. ಜನಗಳೂ ಅದನ್ನೇ ಹೇಳುತ್ತಿದ್ದಾರೆ. ಏಕೆಂದರೆ ಸಿಎಂ ಸ್ಟಾಲಿನ್ ಅವರ ಕೆಲಸಗಳು ಆ ರೀತಿ ಆಗಿವೆ’ ಎಂದರು.
‘ಡಿಎಂಕೆ ಸೇರುವಿರಾ‘? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಸ್ವಲ್ಪ ತಾಳ್ಮೆಯಿಂದ ಇರಿ’ ಎಂದಷ್ಟೇ ಉತ್ತರಿಸಿದರು. ಓ. ಪನ್ನೀರಸೆಲ್ವಂ ಅವರು ಇತ್ತೀಚೆಗೆ ಎಐಎಡಿಎಂಕೆಯಲ್ಲಿ ಮಾಜಿ ಸಿಎಂ ಪಳನಿಸ್ವಾಮಿ ಅವರ ಜೊತೆ ಮುನಿಸಿನಿಂದ ಉಚ್ಚಾಟನೆಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.