ಡಿಎಂಕೆ ಕಾರ್ಯಕರ್ತರಿಂದ ಸ್ವಾಮೀಜಿ ಪ್ರತಿಕೃತಿ ದಹನ (ಚಿತ್ರ: ಎಎನ್ಐ)
ಚೆನ್ನೈ: ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ತಲೆ ಕಡಿದು ತಂದವರಿಗೆ ₹10 ಕೋಟಿ ಬಹುಮಾನ ನೀಡುವುದಾಗಿ ಬೆದರಿಕೆವೊಡ್ಡಿದ್ದ ಅಯೋಧ್ಯೆಯ ತಪಸ್ವಿ ಛವನಿ ದೇವಸ್ಥಾನದ ಮುಖ್ಯ ಅರ್ಚಕ ಪರಮಹಂಸ ಆಚಾರ್ಯ ಸ್ವಾಮೀಜಿ ಪ್ರತಿಕೃತಿಯನ್ನು ಡಿಎಂಕೆ ಕಾರ್ಯಕರ್ತರು ದಹಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಸನಾತನ ಧರ್ಮ ಕೊರೊನಾ, ಡೆಂಗಿ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು’ ಎಂಬ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆ ದೇಶದಾದ್ಯಂತ ವಿವಾದ ಹುಟ್ಟುಹಾಕಿದ್ದು, ಹಿಂದೂತ್ವ ಸಂಘಟನೆಗಳು, ಬಿಜೆಪಿ ಸೇರಿದಂತೆ ಹಲವರು ವಿರೋಧ ವ್ಯಕ್ತಪಡಿಸಿದ್ದರು. ಸ್ಟಾಲಿನ್ ಅವರು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಪಟ್ಟುಹಿಡಿದಿದ್ದರು.
ವೆಲ್ಲೂರಿನಲ್ಲಿ ಜಮಾಯಿಸಿದ ಡಿಎಂಕೆ ಪಕ್ಷದ 100ಕ್ಕೂ ಹೆಚ್ಚು ಕಾರ್ಯಕರ್ತರು, ಸ್ವಾಮೀಜಿಯ ಪ್ರತಿಕೃತಿಯನ್ನು ದಹಿಸಿ, ಸ್ವಾಮೀಜಿ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಕಾರ್ಯಕರ್ತರನ್ನು ತಡೆದು ನಿಲ್ಲಿಸಿ, ಪ್ರತಿಕೃತಿಗೆ ನೀರು ಸುರಿದಿದ್ದಾರೆ.
ಹತ್ತು ಕೋಟಿ ಅಲ್ಲ ನೂರು ಕೋಟಿ ಕೊಡುತ್ತೇನೆಂದ ಸ್ವಾಮೀಜಿ
ಬೆದರಿಕೆ ಹೇಳಿಕೆಗೆ ವಿರೋಧ ವ್ಯಕ್ತವಾದ ಮೇಲೂ ಸ್ವಾಮೀಜಿ ತಮ್ಮ ಹೇಳಿಕೆಯನ್ನು ಪುನರುಚ್ಛರಿಸಿದ್ದಾರೆ. ‘ಸ್ಟಾಲಿನ್ ಹೇಳಿಕೆ ಕೋಟ್ಯಂತರ ಜನರಿಗೆ ನೋವುಂಟು ಮಾಡಿರುವುದರಿಂದ ಬಹುಮಾನ ಮೊತ್ತವನ್ನು ₹10 ಕೋಟಿಯಿಂದ100 ಕೋಟಿಗೆ ಹೆಚ್ಚಿಸಲು ಸಿದ್ಧ’ ಎಂದು ಸ್ವಾಮೀಜಿ ಹೇಳಿದ್ದಾರೆ.
ಓದಿ: ಉದಯನಿಧಿ ಸ್ಟಾಲಿನ್ ತಲೆ ಕಡಿದು ತಂದವರಿಗೆ ₹10 ಕೋಟಿ ಎಂದ ಅಯೋಧ್ಯೆ ಸ್ವಾಮೀಜಿ!
ಸ್ಟಾಲಿನ್ ಫೋಟೋಗೆ ಕತ್ತಿಯಿಂದ ಇರಿಯುವುದರ ಮೂಲಕ ಸಾಂಕೇತಿಕವಾಗಿ ತಲೆದಂಡ ಮಾಡಿದ ಸ್ವಾಮೀಜಿ, ಫೋಟೊವನ್ನು ಸುಟ್ಟು ಹಾಕಿದ್ದಾರೆ.
ಸ್ವಾಮೀಜಿ ಬಳಿ ₹10 ಕೋಟಿ ಹೇಗೆ ಬಂತು?
ಒಬ್ಬ ಸಾಮಾನ್ಯ ದಾರ್ಶನಿಕನ ಬಳಿ ₹10 ಕೋಟಿ ರೂಪಾಯಿ ನಗದು ಹೇಗೆ ಬಂತು? ಆತ ನಿಜವಾದ ದಾರ್ಶನಿಕನೇ ಅಥವಾ ನಕಲಿಯೇ? ಎಂದು ಸ್ವಾಲಿನ್ ಪ್ರಶ್ನಿಸಿದ್ದಾರೆ.
ಸ್ಟಾಲಿನ್ ನಿವಾಸಕ್ಕೆ ಭದ್ರತೆ
ಜೀವ ಬೆದರಿಕೆ ಬಂದ ಹಿನ್ನೆಲೆ ಉದಯನಿಧಿ ಸ್ಟಾಲಿನ್ ನಿವಾಸದ ಹೊರಗೆ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.