ADVERTISEMENT

ಆಯೋಗವನ್ನು ಅಲಕ್ಷಿಸಬೇಡಿ; ಮಮತಾಗೆ ಚುನಾವಣಾ ಆಯೋಗ ತೀಕ್ಷ್ಣ ಪ್ರತಿಕ್ರಿಯೆ

ಪಿಟಿಐ
Published 17 ಮಾರ್ಚ್ 2021, 6:06 IST
Last Updated 17 ಮಾರ್ಚ್ 2021, 6:06 IST
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ   

ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ತೀಕ್ಷ್ಣ ಸಂದೇಶ ರವಾನಿಸಿರುವ ಚುನಾವಣಾ ಆಯೋಗವು, ನಿರಂತರ ಕೊಂಕುನುಡಿಯಿಂದ ಸಂಸ್ಥೆಯನ್ನು ಅಲಕ್ಷಿಸಬೇಡಿ ಎಂದು ಹೇಳಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಅಭಿಯಾನದಲ್ಲಿ ನಿರಂತರ ವಾಗ್ದಾಳಿನಡೆಸುತ್ತಲೇಬಂದಿರುವ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗವು ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ವರ್ತಿಸುತ್ತಿದೆ ಎಂದು ಆರೋಪಿಸಿದ್ದರು.

ಇತ್ತೀಚೆಗಿನ ದಿನಗಳಲ್ಲಿ ಕೋಲ್ಕತ್ತ ಮತ್ತು ರಾಷ್ಟ್ರ ರಾಜಧಾನಿಯಲ್ಲಿ ಟಿಎಂಸಿ ಪ್ರತಿನಿಧಿಗಳನ್ನು ಭೇಟಿಯಾದರೂ ಆಯೋಗವು ರಾಜಕೀಯ ಪಕ್ಷಗಳನ್ನು ಭೇಟಿ ಮಾಡಬೇಕೆಂದು ಮಮತಾ ಆಗ್ರಹಿಸಿದ್ದರೆ ಅದು ಚುನಾವಣೆ ಆಯೋಗವನ್ನು ಕಡೆಗಣಿಸುವ ಪ್ರಯತ್ನವಾಗಿದೆ ಎಂದು ಮಾರ್ಚ್ 14ರಂದು ಚುನಾವಣಾ ಆಯುಕ್ತ ಸುನಿಲ್ ಅರೋರಾಗೆ ಮಮತಾ ಬ್ಯಾನರ್ಜಿ ಬರೆದ ಪತ್ರಕ್ಕೆ ಉತ್ತರವಾಗಿ ತಿಳಿಸಿದೆ.

ADVERTISEMENT

ಪಶ್ಚಿಮ ಬಂಗಾಳ ಚುನಾವಣಾ ಆಯೋಗದ ಉಪ ಆಯುಕ್ತ ಸುದೀಪ್ ಜೈನ್ ನೀಡಿರುವ ಉತ್ತರದಲ್ಲಿ ಮಮತಾ ಬ್ಯಾನರ್ಜಿ ಆರೋಪಗಳು ದುರದೃಷ್ಟಕರ ಎಂದು ಉಲ್ಲೇಖಿಸಲಾಗಿದೆ.

ಇತ್ತೀಚೆಗೆ, ಚುನಾವಣಾ ಆಯೋಗದ ಉಪ ಆಯುಕ್ತ ಸುದೀಪ್ ಜೈನ್ ತಟಸ್ಥ ನಿಲುವನ್ನು ಪ್ರಶ್ನಿಸಿದ್ದ ಟಿಎಂಸಿ, ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಸೇವೆಯಿಂದ ವರ್ಗಾಯಿಸಬೇಕು ಎಂದು ಒತ್ತಾಯಿಸಿತ್ತು. ಆದರೆ ಚುನಾವಣಾ ಆಯೋಗವು ಸುದೀಪ್ ಜೈನ್ ಬೆಂಬಲಕ್ಕೆ ನಿಂತಿತ್ತು.

ಈ ಎಲ್ಲ ಘಟನೆಗಳಿಂದಾಗಿ ಪಶ್ಚಿಮ ಬಂಗಾಳ ಸರ್ಕಾರ ಹಾಗೂ ಚುನಾವಣಾ ಆಯೋಗದ ನಡುವೆ ಆರೋಪ ಪ್ರತ್ಯಾರೋಪಗಳು ಮುಂದುವರಿದಿದೆ.

ಚುನಾವಣಾ ಆಯೋಗವನ್ನು ಯಾರು ನಡೆಸುತ್ತಿದ್ದಾರೆ ಎಂದು ಗೌರವದಿಂದಲೇ ಪ್ರಶ್ನಿಸುತ್ತಿದ್ದೇನೆ? ಅಮಿತ್ ಶಾ ನೀವು ಅದನ್ನು ನಡೆಸುತ್ತಿದ್ದೀರಾ? ನಾವು ಮುಕ್ತ ಮತ್ತು ನ್ಯಾಯಯುತ ಚುನಾವಣೆಯನ್ನು ಬಯಸುತ್ತೇವೆ. ಆದರೆ ಅಮಿತ್ ಶಾ ಯಾರು? ಚುನಾವಣಾ ಆಯೋಗಕ್ಕೆ ಮಾರ್ಗದರ್ಶನ ನೀಡಲು ಅವರು ಯಾರು? ಚುನಾವಣಾ ಆಯೋಗದ ಕೆಲಸದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ನನ್ನ ಭದ್ರತಾ ಅಧಿಕಾರಿಯನ್ನು ತೆಗೆದು ಹಾಕಲಾಗಿದೆ. ಅವರಿಗೆ ಏನು ಬೇಕು? ನನ್ನನ್ನು ಕೊಲ್ಲಲು ಬಯಸುವಿರಾ ಎಂದು ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದರು.

ಬಿಜೆಪಿ ಹಸ್ತಕ್ಷೇಪ ಮುಂದುವರಿದರೆ ಚುನಾವಣಾ ಆಯೋಗದ ಕಚೇರಿಯ ಮುಂದೆ ಪ್ರತಿಭಟನೆ ನಡೆಸುವುದಾಗಿ ಮಮತಾ ಎಚ್ಚರಿಕೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.