ಸಂವಿಧಾನ
ನವದೆಹಲಿ: ಸಂವಿಧಾನದ ಪೀಠಿಕೆ ಕುರಿತಂತೆ ಆರ್ಎಸ್ಎಸ್ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ನೀಡಿದ ಹೇಳಿಕೆಯು ವಿವಾದಕ್ಕೀಡಾಗಿರುವ ನಡುವೆಯೇ, ‘ಭಾರತದ ಸಂವಿಧಾನವನ್ನು ಆರ್ಎಸ್ಎಸ್ ನಿಜವಾಗಿಯೂ ಒಪ್ಪಿಕೊಳ್ಳುತ್ತದೆಯೇ’ ಎಂದು ಸಿಪಿಐ ಭಾನುವಾರ ಪ್ರಶ್ನಿಸಿದೆ.
ಸಿಪಿಐ ಸಂಸದ ಸಂತೋಷ ಕುಮಾರ್ ಅವರು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಬರೆದ ಪತ್ರದಲ್ಲಿ ಈ ಪ್ರಶ್ನೆ ಕೇಳಿದ್ದಾರೆ.
‘ಧ್ರುವೀಕರಣ ತಡೆಯುವುದಕ್ಕಾಗಿ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿ, ಚರ್ಚೆ ಹುಟ್ಟು ಹಾಕುವುದನ್ನು ಆರ್ಎಸ್ಎಸ್ ನಿಲ್ಲಿಸುವುದು ಇಂದಿನ ತುರ್ತು. ಸಂವಿಧಾನದಲ್ಲಿ ‘ಜಾತ್ಯತೀತ’ ಮತ್ತು ‘ಸಮಾಜವಾದ’ ಪದಗಳನ್ನು ಯಾವುದೇ ವಿವೇಚನೆ ಇಲ್ಲದೇ ಸೇರಿಸಲಾಗಿಲ್ಲ. ಅವು ಮೂಲಭೂತ ಆದರ್ಶಗಳೇ’ ಆಗಿವೆ ಎಂದು ಅವರು ಪತ್ರದಲ್ಲಿ ಪ್ರತಿಪಾದಿಸಿದ್ದಾರೆ.
‘ವೈವಿಧ್ಯಗಳಿಂದ ಕೂಡಿದ ಭಾರತದಂತಹ ದೇಶದಲ್ಲಿ ಜಾತ್ಯತೀತವು ವಿವಿಧತೆಯಲ್ಲಿ ಏಕತೆಯನ್ನು ಖಾತ್ರಿಪಡಿಸುತ್ತದೆ. ಸಮಾಜವಾದವು ದೇಶದ ಪ್ರಜೆಗಳಿಗೆ ನ್ಯಾಯ ಮತ್ತು ಘನತೆಯನ್ನು ತಂದುಕೊಡುತ್ತದೆ’ ಎಂದೂ ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.