ಆಸ್ಪತ್ರೆ
Credit: iStock Photo
ನರ್ಮದಾಪುರಂ /ಭೋಪಾಲ್: ಮಧ್ಯಪ್ರದೇಶದ ನರ್ಮದಾಪುರಂನ ಸರ್ಕಾರಿ ಆಸ್ಪತ್ರೆಯಲ್ಲಿ ಅಪಘಾತಕ್ಕೀಡಾದ ವ್ಯಕ್ತಿಯ ಮೃತದೇಹವನ್ನು ನಾಯಿಯೊಂದು ಕಚ್ಚಿ ತಿಂದಿರುವ ಘಟನೆ ಭಾನುವಾರ ನಡೆದಿದೆ. ಈ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಲನ್ಪುರ ಬಳಿ ಅಪಘಾತದಲ್ಲಿ ಮೃತಪಟ್ಟ ನಿಖಿಲ್ ಚೌರಾಸಿಯಾ (21) ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ಇದೇ ವೇಳೆ ನಿಖಿಲ್ ಮೃತದೇಹವನ್ನು ನಾಯಿ ಕಚ್ಚಿ ತಿಂದಿದೆ ಎಂದು ವರದಿಯಾಗಿದೆ.
‘ನಾನು ನೀರು ಕುಡಿಯಲು ಹೊರಗೆ ಹೋಗಿದ್ದೆ. ವಾಪಸ್ ಬಂದಾಗ ನಾಯಿಯೊಂದು ಮೃತದೇಹದ ತುಂಡನ್ನು ಕಚ್ಚಿಕೊಂಡು ಓಡಿಹೋಗುವುದನ್ನು ನೋಡಿದೆ’ ಎಂದು ಮೃತ ವ್ಯಕ್ತಿಯ ಸೋದರಸಂಬಂಧಿ ಅಂಕಿತ್ ಗೋಹಿಲೆ ತಿಳಿಸಿದ್ದಾರೆ.
ನಿರ್ಲಕ್ಷ್ಯದ ಆರೋಪದಡಿ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಅಂಕಿತ್ ದೂರು ದಾಖಲಿಸಿದ್ದಾರೆ.
‘ಘಟನೆ ಸಂಬಂಧ ಭದ್ರತಾ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಸುಧೀರ್ ವಿಜಯವರ್ಗಿಯಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.