ADVERTISEMENT

ಯಾವುದೇ ಪದವಿ, ಟಿಕೆಟ್‌ಗಳ ಆಸೆ ಇಟ್ಟುಕೊಳ್ಳಬೇಡಿ; ಎಎಪಿ ನಾಯಕರಿಗೆ ಕೇಜ್ರಿವಾಲ್

ಪಿಟಿಐ
Published 11 ಸೆಪ್ಟೆಂಬರ್ 2021, 10:48 IST
Last Updated 11 ಸೆಪ್ಟೆಂಬರ್ 2021, 10:48 IST
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್   

ನವದೆಹಲಿ: ಚುನಾವಣೆಯಲ್ಲಿ ಸ್ಪರ್ಧಿಸಲು ಯಾವುದೇ ಪದವಿ ಹಾಗೂ ಟಿಕೆಟ್‌ಗಳ ಆಸೆಯನ್ನು ಇಟ್ಟುಕೊಳ್ಳಬಾರದು. ಇದರ ಬದಲಿಗೆ ಸಮಾಜ ಹಾಗೂ ದೇಶಕ್ಕಾಗಿ ಕೆಲಸ ಮಾಡುವ ಮೂಲಕ ತಮ್ಮ ಯೋಗ್ಯತೆಯನ್ನು ಸಾಬೀತು ಮಾಡುವಂತೆ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದಾರೆ.

ವರ್ಚುವಲ್ ಆಗಿ ನಡೆದ ಪಕ್ಷದ ರಾಷ್ಟ್ರೀಯ ಕೌನ್ಸಿಲ್ ಸಭೆಯಲ್ಲಿ ಮಾತನಾಡಿದ ಕೇಜ್ರಿವಾಲ್, ಜನರು ಎಎಪಿಯನ್ನು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದಂತೆ ಗುರುತಿಸಲು ನಾನು ಬಯಸುವುದಿಲ್ಲ. ಆದ್ದರಿಂದ ಹುದ್ದೆ ಹಾಗೂ ಟಿಕೆಟ್ ಆಕಾಂಕ್ಷೆಯನ್ನು ಕೈಬಿಡುವಂತೆ ಪಕ್ಷದ ನಾಯಕರಿಗೆ ಕರೆ ನೀಡಿದ್ದಾರೆ.

'ನೀವು ನನ್ನ ಬಳಿ ಪದವಿಯನ್ನು ಬಯಸಿದರೆ ಅದರರ್ಥ ನೀವು ಅದಕ್ಕೆ ಅರ್ಹರಲ್ಲ. ಇದರ ಬದಲಾಗಿ ನೀವು ಹುದ್ದೆ ವಹಿಸುವಂತೆ ಖುದ್ದಾಗಿ ನಾನೇ ಹೇಳುವ ರೀತಿಯಲ್ಲಿ ಕೆಲಸ ಮಾಡಬೇಕು' ಎಂದು ಹೇಳಿದ್ದಾರೆ.

ಮುಂಬರುವ ಪಂಜಾಬ್, ಗೋವಾ, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿ ಪಕ್ಷವು ಬಲವೃದ್ಧಿಸಿಕೊಳ್ಳುವ ಇರಾದೆಯಲ್ಲಿದೆ.

ಭಗತ್ ಸಿಂಗ್ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ಆದರ್ಶ ವ್ಯಕ್ತಿಗಳು. ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಅವರಂತೆ ತ್ಯಾಗ ಮಾಡಲು ಸಿದ್ಧರಾಗಿರಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.