ADVERTISEMENT

ಬಿಜೆಪಿಯಿಂದ ಹೊರಹಾಕಿದರೂ ಅಂಜುವುದಿಲ್ಲ: ಶತ್ರುಘ್ನ ಸಿನ್ಹಾ

ಸವಾಲು

ಪಿಟಿಐ
Published 19 ಜನವರಿ 2019, 20:00 IST
Last Updated 19 ಜನವರಿ 2019, 20:00 IST
ಫಾರೂಕ್‌ ಅಬ್ದುಲ್ಲಾ ಅವರು ಶತ್ರುಘ್ನ ಸಿನ್ಹಾ ಅವರನ್ನು ಅಭಿನಂದಿಸಿದರು. ಚಂದ್ರಬಾಬು ನಾಯ್ಡು ಇದ್ದಾರೆ
ಫಾರೂಕ್‌ ಅಬ್ದುಲ್ಲಾ ಅವರು ಶತ್ರುಘ್ನ ಸಿನ್ಹಾ ಅವರನ್ನು ಅಭಿನಂದಿಸಿದರು. ಚಂದ್ರಬಾಬು ನಾಯ್ಡು ಇದ್ದಾರೆ   

ಕೋಲ್ಕತ್ತ: ‘2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಿಸಬೇಕು. ನನ್ನನ್ನು ಪಕ್ಷದಿಂದ ಹೊರಹಾಕಿದರೂ ನಾನೇನು ಅಂಜುವುದಿಲ್ಲ.ನಿಜಾಂಶಗಳನ್ನು ಮುಚ್ಚಿಟ್ಟರೆ, ಜನರು ‘ಚೌಕಿದಾರ್‌ ಚೋರ್‌ ಹೈ’ ಎಂದು ಹೇಳುವುದನ್ನು ಮುಂದುವರಿಸುತ್ತಾರೆ’ ಎಂದು ಬಿಜೆಪಿ ಬಂಡಾಯ ನಾಯಕ ಮತ್ತು ಸಂಸದ ಶತ್ರುಘ್ನ ಸಿನ್ಹಾ ಹೇಳಿದ್ದಾರೆ.

‘ಬಿಜೆಪಿ ಕಾರ್ಯಕರ್ತನಿಗಿಂತ ಮೊದಲು ನಾನು ಭಾರತದ ಪ್ರಜೆಯಾಗಿದ್ದೇನೆ. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ ಜನಪರವಾಗಿತ್ತು. ಆದರೆ, ಈಗ ಸರ್ವಾಧಿಕಾರಿ ಸರ್ಕಾರ ಇದೆ’ ಎಂದು ಆರೋಪಿಸಿದರು.

ಬಿಜೆಪಿ ಸೋಲು ಮಖ್ಯ ಗುರಿಯಾಗಲಿ: ‘ಬಿಜೆಪಿ ಸೋಲಿಸುವುದೇ ನಮ್ಮ ಮುಖ್ಯ ಗುರಿಯಾಗಬೇಕು. ಮಹಾಭಾರತದ ಅರ್ಜುನನಂತೆ ಗುರಿ ಇಟ್ಟುಕೊಳ್ಳಬೇಕು’ ಎಂದು ಕೇಂದ್ರದ ಮಾಜಿ ಸಚಿವ ಅರುಣ್‌ ಶೌರಿ ಹೇಳಿದ್ದಾರೆ.

ADVERTISEMENT

ಬಿಜೆಪಿ ಕೊನೆಗಾಣಿಸಲು ವಿರೋಧ ಪಕ್ಷಗಳು ಒಂದಾಗಿ ಕೆಲಸ ಮಾಡಬೇಕು. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ವಿರೋಧ ಪಕ್ಷಗಳ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕು. ಇದು ಸುಲಭವಲ್ಲ, ಆದರೆ, ದೇಶಕ್ಕಾಗಿ ತ್ಯಾಗ ಮಾಡುವುದು ಅಗತ್ಯವಿದೆ ಎಂದರು.

ಪ್ರಧಾನಿ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಸುಳ್ಳಿನ ಲೆಕ್ಕಾಚಾರದ ಮೇಲೆ ಈ ಸರ್ಕಾರ ನಡೆಯುತ್ತಿದೆ ಎಂದರು.

‘ಸಬ್‌ ಕಾ ಸಾಥ್‌, ಸಬ್‌ ಕಾ ವಿನಾಶ್‌!’

ಆಡಳಿತಕ್ಕೆ ಬಂದ ಸಂದರ್ಭದಲ್ಲಿ ದೇಶ ಭಕ್ತಿ ಸರ್ಕಾರ ಎಂದು ಹೇಳಿ ಕೊಂಡಿದ್ದ ಬಿಜೆಪಿ, ಈಗ ದೇಶ ದ್ರೋಹಿ ಸರ್ಕಾರ ಆಗಿದೆ ಎಂದು ಬಿಜೆಪಿ ಬಂಡಾಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ ಟೀಕಿಸಿದ್ದಾರೆ.

ರಾಷ್ಟ್ರದಬೆಳವಣಿಗೆಯ ಬಗ್ಗೆ ಸುಳ್ಳು ಅಂಕಿ–ಸಂಖ್ಯೆಗಳನ್ನು ಈ ಸರ್ಕಾರ ಹೇಳಿದಷ್ಟು ಬೇರ‍್ಯಾವ ಸರ್ಕಾರವೂ ಹೇಳಿರಲಿಲ್ಲ.ಪ್ರಧಾನಿ ಮೋದಿ ಸರ್ಕಾರದ ಘೋಷಣೆ ‘ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ್‌’ ಈಗ ಬದಲಾಗಿದ್ದು, ಅದು ‘ಸಬ್‌ ಕಾ ಸಾಥ್‌ ಸಬ್‌ ಕಾ ವಿನಾಶ್‌’ ಆಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.