ADVERTISEMENT

ವಿದ್ಯಾಸಾಗರ್ ಪುತ್ಥಳಿ ಸ್ಥಾಪಿಸಲು ನಮಗೆ ಬಿಜೆಪಿಯ ಹಣ ಬೇಡ: ಮಮತಾ ಬ್ಯಾನರ್ಜಿ

ಪಿಟಿಐ
Published 16 ಮೇ 2019, 14:32 IST
Last Updated 16 ಮೇ 2019, 14:32 IST
   

ಕೋಲ್ಕತ್ತ: ಕೋಲ್ಕತ್ತದಲ್ಲಿ ಈಶ್ವರಚಂದ್ರ ವಿದ್ಯಾಸಾಗರ್ ಪುತ್ಥಳಿ ಸ್ಥಾಪಿಸಲು ನಮಗೆ ಬಿಜೆಪಿಯ ದುಡ್ಡು ಬೇಡ. ಅದಕ್ಕೆ ಬೇಕಾದ ಹಣ ನಮ್ಮಲ್ಲಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಕೋಲ್ಕತ್ತದಲ್ಲಿ ಮಂಗಳವಾರ ಅಮಿತ್ ಶಾ ರೋಡ್ ಶೋ ವೇಳೆ ನಡೆದ ಹಿಂಸಾಚಾರದಲ್ಲಿ ವಿದ್ಯಾಸಾಗರ್ ಕಾಲೇಜಿನ ಆವರಣದಲ್ಲಿದ್ದ ವಿದ್ಯಾಸಾಗರ್ ಅವರ ಪ್ರತಿಮೆ ಧ್ವಂಸವಾಗಿತ್ತು.

ಪುತ್ಥಳಿ ಧ್ವಂಸದ ಕುರಿತು ಉತ್ತರ ಪ್ರದೇಶದ ಮವೂನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಸಹೋದರ ಅಮಿತ್‌ ಶಾ ಅವರ ಕೋಲ್ಕತ್ತ ರ್‍ಯಾಲಿ ವೇಳೆ ಟಿಎಂಸಿ ಕಾರ್ಯಕರ್ತರು ಗೂಂಡಾಗಿರಿ ಪ್ರದರ್ಶಿಸಿದ್ದಾರೆ. ಅವರು ಈಶ್ವರಚಂದ್ರ ವಿದ್ಯಾಸಾಗರ್ ಅವರ ಪುತ್ಥಳಿಯನ್ನು ಧ್ವಂಸ ಮಾಡಿದ್ದಾರೆ. ವಿದ್ಯಾಸಾಗರ ಅವರ ಕನಸು ಸಾಕ್ಷಾತ್ಕರಿಸಲು ನಾವು ಬದ್ಧರಾಗಿದ್ದೇವೆ ಹಾಗೂ ಅದೇ ಸ್ಥಳದಲ್ಲಿ ನಾವು ಅವರ ಭವ್ಯ ಪ್ರತಿಮೆಯನ್ನು ಸ್ಥಾಪಿಸಲಿದ್ದೇವೆ’ ಎಂದಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿದ ಮಮತಾ, ಕೋಲ್ಕತ್ತದಲ್ಲಿ ವಿದ್ಯಾಸಾಗರ್ ಪುತ್ಥಳಿ ಸ್ಥಾಪಿಸುವುದಾಗಿ ಮೋದಿ ಭರವಸೆ ನೀಡಿದ್ದಾರೆ, ನಾವು ಯಾಕೆ ಬಿಜೆಪಿಯವರ ಹಣ ತೆಗೆದುಕೊಳ್ಳಲಿ? ಬಂಗಾಳದಲ್ಲಿ ಅದಕ್ಕೆ ಬೇಕಾದ ದುಡ್ಡು ಇದೆ ಎಂದಿದ್ದಾರೆ.

ಡೈಮಂಡ್ ಹಾರ್ಬರ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಮಾತನಾಡಿದ ಮಮತಾ, ಕಳೆದ 5 ವರ್ಷದಲ್ಲಿ ಮೋದಿಯವರಿಗೆ ರಾಮ ಮಂದಿರ ನಿರ್ಮಿಸಲು ಸಾಧ್ಯವಾಗಿಲ್ಲ, ಅಂತವರುವಿದ್ಯಾಸಾಗರ್ ಅವರ ಪುತ್ಥಳಿ ಸ್ಥಾಪನೆಮಾಡುತ್ತಾರಾ? ಬಂಗಾಳದ ಜನರು ನಿಮ್ಮ ಮುಂದೆ ಕೈ ಚಾಚುವುದಿಲ್ಲ. ನಿಮ್ಮ ಗೂಂಡಾ ನೇತಾರ ಬಂದು ಬಂಗಾಳ್ ಕಂಗಾಲ್ ಹೈ ಎಂದಿದ್ದರು. ಬಂಗಾಳಿಗಳು ಕಂಗಾಲಾಗಿದ್ದಾರಾ? ಎಂದು ಗುಡುಗಿದ್ದಾರೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.