ನವದೆಹಲಿ: 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕಾಗಿ ದೆಹಲಿಯ ಕೆಂಪುಕೋಟೆಯಲ್ಲಿ ಗುರುವಾರ ಬೆಳಿಗ್ಗೆ 7ರಿಂದ 9 ಗಂಟೆಯವರಿಗೆ ಭಾರತೀಯ ನೌಕಾಪಡೆ, ವಾಯುಪಡೆ ಮತ್ತು ಭೂಸೇನಾ ಪಡೆಗಳು ಗುರುವಾರ ತಾಲೀಮು ನಡೆಸಿದವು.
‘ರಕ್ಷಣಾ ಸಿಬ್ಬಂದಿ ಮುಂಜಾನೆ 3ಗಂಟೆಗೆ ಸ್ಥಳದಲ್ಲಿ ಹಾಜರಿದ್ದರು. ಬೆಳಿಗ್ಗೆ 7.18ಕ್ಕೆ ಪ್ರಧಾನ ಮಂತ್ರಿ ಅವರ ಬೆಂಗಾವಲು ಪಡೆಯು ಕೆಂಪುಕೋಟೆ ತಲುಪಿತು. ಬೆಳಿಗ್ಗೆ 9ಗಂಟೆಯ ಸುಮಾರಿಗೆ ತಾಲೀಮು ಯಶಸ್ವಿಯಾಗಿ ಮುಕ್ತಾಯಗೊಂಡಿತು’ ಎಂದು ದೆಹಲಿಯ ಡೆಪ್ಯುಟಿ ಪೊಲೀಸ್ ಕಮಿಷನರ್ (ಉತ್ತರ) ಮೋನಿಕಾ ಭಾರದ್ವಾಜ್ ತಿಳಿಸಿದ್ದಾರೆ.
ಸ್ಥಳದಲ್ಲಿ ಕಠಿಣ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು. ತಾಲೀಮಿನ ಸಂದರ್ಭದಲ್ಲಿ ಕೆಂಪುಕೋಟೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನ ಸಂಚಾರವನ್ನು ನಿಷೇಧಿಸಲಾಗಿತ್ತು. ಆಗಸ್ಟ್ 15 ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮಕ್ಕಾಗಿ ಈಗಾಗಲೇ ಕೆಂಪು ಕೋಟೆಯನ್ನು ಸಾರ್ವಜನಿಕ ವೀಕ್ಷಣೆಗೆ ಬಂದ್ ಮಾಡಲಾಗಿದೆ.
‘ಕೆಂಪು ಕೋಟೆಯಲ್ಲಿ ಸುಮಾರು 4 ಸಾವಿರ ಭದ್ರತಾ ಸಿಬ್ಬಂದಿಯನ್ನು ರಕ್ಷಣೆಗಾಗಿ ನಿಯೋಜಿಸಲಾಗುವುದು. ಸಿಬ್ಬಂದಿ ಅಂತರ ಕಾಯ್ದುಕೊಳ್ಳಲಿದ್ದಾರೆ’ ಎಂದು ಪೊಲೀಸರು ಹೇಳಿದ್ದಾರೆ.
‘ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಆಹ್ವಾನಿತರಲ್ಲಿ, ಕಳೆದ ಎರಡು ವಾರಗಳಲ್ಲಿ ಕೋವಿಡ್–19 ಲಕ್ಷಣಗಳು ಕಾಣಿಸಿಕೊಂಡಿರುವವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಾರದು. ಆಹ್ವಾನಿತರು ಗೃಹ ಮತ್ತು ಆರೋಗ್ಯ ಸಚಿವಾಲಯವು ಹೊರಡಿಸಿರುವ ಕೋವಿಡ್ ಮಾರ್ಗಸೂಚಿಯನ್ನು ಪಾಲಿಸಬೇಕು’ ಎಂದು ದೆಹಲಿ ಪೊಲೀಸರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.