ADVERTISEMENT

Cough Syrup Row: ಇಬ್ಬರು ಹಿರಿಯ ಡ್ರಗ್‌ ಇನ್‌ಸ್ಪೆಕ್ಟರ್‌ಗಳ ಅಮಾನತು

ಕೆಮ್ಮಿನ ಸಿರಪ್‌ನ ಕಲಬೆರಕೆ ಪ್ರಕರಣ

ಪಿಟಿಐ
Published 9 ಅಕ್ಟೋಬರ್ 2025, 15:03 IST
Last Updated 9 ಅಕ್ಟೋಬರ್ 2025, 15:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ‘ಹಲವು ಮಕ್ಕಳ ಸಾವಿಗೆ ಕಾರಣವಾಗಿರುವ ‘ಕೋಲ್ಡ್‌ರಿಫ್‌’ ಎಂಬ ಕೆಮ್ಮಿನ ಸಿರಪ್‌ನ ಕಲಬೆರಕೆಯಲ್ಲಿ ಕರ್ತವ್ಯಲೋಪ ಎಸಗಿದ ಇಬ್ಬರು ಡ್ರಗ್‌ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ. ಫಾರ್ಮಾ ಕಂಪನಿಯನ್ನು ಶಾಶ್ವತವಾಗಿ ಮುಚ್ಚಲಾಗಿದೆ’ ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಹ್ಮಣಿಯನ್ ತಿಳಿಸಿದ್ದಾರೆ.

‘ಕಳೆದೆರಡು ವರ್ಷದಲ್ಲಿ ಸ್ರೇಸನ್‌ ಫಾರ್ಮಾಸ್ಯುಟಿಕಲ್‌ ಕಂಪನಿಯ ತಯಾರಿಕ ಕೇಂದ್ರಕ್ಕೆ ತೆರಳಿ ಏಕೆ ಪರೀಕ್ಷೆ ನಡೆಸಿರಲಿಲ್ಲ ಎಂದು ನೋಟಿಸ್‌ ನೀಡಲಾಗಿತ್ತು, ಬಳಿಕ ಅವರನ್ನು ಅಮಾನತುಗೊಳಿಸಲಾಗಿದೆ’ ಎಂದು ಹೇಳಿದ್ದಾರೆ.

‘ಕೆಮ್ಮಿನ ಸಿರಪ್‌ನಲ್ಲಿ ಕಲಬೆರಕೆಯಾಗಿರುವುದನ್ನು ತಮಿಳುನಾಡು ಮೊದಲು ಖಚಿತಪಡಿಸಿ, ನಂತರ ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಮಾಹಿತಿ ನೀಡಿತ್ತು. ಇದಾದ ಬಳಿಕ ಮಧ್ಯಪ್ರದೇಶ, ಒಡಿಶಾ, ಪುದುಚೇರಿಗೂ ಮಾಹಿತಿ ನೀಡಲಾಗಿತ್ತು’ ಎಂದು ತಿಳಿಸಿದ್ದಾರೆ.

ADVERTISEMENT

‘ಅಕ್ಟೋಬರ್‌ 3ರಂದೇ ಕೆಮ್ಮಿನ ಸಿರಪ್‌ ತಯಾರಿಕೆಯನ್ನು ಸ್ಥಗಿತಗೊಳಿಸಿದ್ದು, ಕಂಪನಿಯ ಉತ್ಪಾದನಾ ಲೈಸೆನ್ಸ್‌ ಅನ್ನು ತಾತ್ಕಲಿಕವಾಗಿ ಹಿಂದಕ್ಕೆ ಪಡೆಯಲಾಗಿತ್ತು. ಅ.7ರಂದು ರಂಗನಾಥನ್‌ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಅ.8ರಂದು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿಸ್ತೃತ ತನಿಖೆ ಮುಂದುವರಿದಿದ್ದು, ಫಾರ್ಮಾ ಕಂಪನಿಯನ್ನು ಶಾಶ್ವತವಾಗಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ಮುಂದಿನ ಮೂರು ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದಿದ್ದಾರೆ.

ಕೋಲ್ಡ್ರಿಫ್‌ನಲ್ಲಿ ಕಲಬೆರಕೆಯಾಗಿರುವುದು ಖಚಿತಪಡುತ್ತಿದ್ದಂತೆಯೇ, ರಾಜ್ಯದಾದ್ಯಂತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದನ್ನು ನಿಷೇಧಿಸಿದ್ದೆವು. ಇದರಿಂದ ದೊಡ್ಡ ಮಟ್ಟದ ಅನಾಹುತ ನಡೆಯುವುದು ತಪ್ಪಿದೆ’ ಎಂದು ಸಚಿವ ಮಾ ಸುಬ್ರಹ್ಮಣಿಯನ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಿಬಿಐ ತನಿಖೆ ಕೋರಿ ಪಿಐಎಲ್‌: ‘ಸುಪ್ರೀಂ’ ಒಪ್ಪಿಗೆ

ನವದೆಹಲಿ:ಕಲಬೆರಕೆ ಕೆಮ್ಮಿನ ಸಿರಪ್‌ನಿಂದ ಮಕ್ಕಳು ಮೃತಪಟ್ಟ ಬೆನ್ನಲ್ಲೇ ಔಷಧ ಸುರಕ್ಷತೆ ವಿಧಾನದಲ್ಲಿ ವ್ಯವಸ್ಥಿತ ಸುಧಾರಣೆ ಹಾಗೂ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐನಿಂದ ವಿಸ್ತೃತ ತನಿಖೆ ನಡೆಸಲು ಆದೇಶ ನೀಡಬೇಕು ಎಂದು ಕೋರಿ  ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್‌) ವಿಚಾರಣೆಗೆ ಸುಪ್ರೀಂಕೋರ್ಟ್‌ ಒಪ್ಪಿಗೆ ಸೂಚಿಸಿದೆ. ತುರ್ತು ವಿಚಾರಣೆ ನಡೆಸುವಂತೆ ಕೋರಿ ವಕೀಲ ವಿಶಾಲ್‌ ತಿವಾರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಉಜ್ಜಲ್‌ ಭುಯಾನ್‌ ಕೆ. ವಿನೋದ್‌ ಚಂದ್ರನ್‌ ಅವರಿದ್ದ ನ್ಯಾಯಪೀಠವು ಅಂಗೀಕರಿಸಿ ಅಕ್ಟೋಬರ್‌ 10ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು. ಮಕ್ಕಳ ಸಾವಿಗೆ ಸಂಬಂಧಿಸಿದ ಬಾಕಿ ಉಳಿದ ಎಲ್ಲ ಎಫ್‌ಐಆರ್‌ ಹಾಗೂ ತನಿಖೆಯನ್ನು ಸಿಬಿಐಗೆ ವರ್ಗಾಯಿಸಬೇಕು. ಪ್ರಕರಣದ ತನಿಖೆಯು ನ್ಯಾಯಸಮ್ಮತ ಹಾಗೂ ಏಕರೂಪವಾಗಿರುವುದಂತೆ ನೋಡಲು ಸುಪ್ರೀಂಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗೆ ತನಿಖೆಯ ಮೇಲುಸ್ತುವಾರಿ ವಹಿಸಬೇಕು ಎಂದು ಪಿಐಎಲ್‌ ಅರ್ಜಿಯಲ್ಲಿ ಕೋರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.