ADVERTISEMENT

ದುರ್ಗಾ ಪೂಜೆ: ಯಮುನಾ ನದಿ, ಕೆರೆ, ಹಳ್ಳಗಳಲ್ಲಿ ಮೂರ್ತಿ ವಿಸರ್ಜನೆಗೆ ನಿಷೇಧ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಅಕ್ಟೋಬರ್ 2021, 6:05 IST
Last Updated 14 ಅಕ್ಟೋಬರ್ 2021, 6:05 IST
ಸಾಂದರ್ಭಿಕ ಚಿತ್ರ (ಪಿಟಿಐ)
ಸಾಂದರ್ಭಿಕ ಚಿತ್ರ (ಪಿಟಿಐ)   

ನವದೆಹಲಿ: ದುರ್ಗಾ ಪೂಜೆ ಸಂದರ್ಭ ಯಮುನಾ ನದಿ ಸೇರಿದಂತೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ದೇವಿಯ ಪ್ರತಿಮೆಗಳನ್ನು ವಿಸರ್ಜನೆ ಮಾಡುವುದನ್ನು ನಿಷೇಧಿಸಿ ದೆಹಲಿ ಮಾಲಿನ್ಯ ನಿಯಂತ್ರಣ ಸಮಿತಿ(ಡಿಪಿಸಿಸಿ) ಆದೇಶ ಹೊರಡಿಸಿದೆ.

ಆದೇಶವನ್ನು ಮೀರಿ ನಡೆದುಕೊಂಡರೆ ಸೆಕ್ಷನ್‌ 33 ಎ ಜಲ (ಸಂರಕ್ಷಣೆ ಮತ್ತು ಮಾಲಿನ್ಯ ತಡೆ) ನೀತಿ. 1974ರ ಅಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಗೂ 6 ವರ್ಷಗಳ ವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಡಿಪಿಸಿಸಿ ಎಚ್ಚರಿಕೆ ನೀಡಿದೆ.

ದುರ್ಗಾ ಮೂರ್ತಿ ಸೇರಿದಂತೆ ಯಾವುದೇ ಮೂರ್ತಿಗಳನ್ನು ತಯಾರಿಸುವ ವೇಳೆ ನೈಸರ್ಗಿಕ ಮಣ್ಣನ್ನು ಮಾತ್ರ ಬಳಸಬೇಕು. ರಾಸಾಯನಿಕ ವಸ್ತುಗಳನ್ನು ಬಳಕೆ ಮಾಡಿದ ಬಣ್ಣಗಳನ್ನು ಬಳಿಯಬಾರದು ಎಂದು ಮೂರ್ತಿ ತಯಾರಕರಿಗೆ ಡಿಪಿಸಿಸಿ ತಿಳಿಸಿದೆ.

ADVERTISEMENT

ಮನೆಯಲ್ಲಿ ಬಕೆಟ್‌ಗಳ ಸಹಾಯದಿಂದ ದೇವಿಯ ಮೂರ್ತಿಯನ್ನು ವಿಸರ್ಜಿಸಬಹುದು. ಆದರೆ ಸಾರ್ವಜನಿಕ ಸ್ಥಳಗಳಲ್ಲಿರುವ ಕೆರೆ, ಹಳ್ಳ, ನದಿಗಳಲ್ಲಿ ಮೂರ್ತಿ ವಿಸರ್ಜನೆ ಮಾಡಬಾರದು ಎಂದು ಡಿಪಿಸಿಸಿ ಪ್ರಕಟಣೆ ಮೂಲಕ ಆದೇಶಿಸಿದೆ.

ಮೂರ್ತಿಗಳನ್ನು ತಯಾರಿಸುವ ವೇಳೆ ರಾಸಾಯನಿಕ ವಸ್ತುಗಳನ್ನು ಬಳಸುವುದರಿಂದ ನೀರು ಮಲಿನಗೊಳ್ಳುತ್ತದೆ. ಮೂರ್ತಿಗಳಿಗೆ ಬಳಿಯುವ ಬಣ್ಣಗಳಿಂದಲೂ ನೀರಿನ ಮಾಲಿನ್ಯವಾಗುತ್ತದೆ. ಇದು ಹಲವು ಅಧ್ಯಯನಗಳಿಂದಲೂ ತಿಳಿದುಬಂದಿದೆ ಎಂದು ಡಿಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.