
ಎಸ್ಐಆರ್ ಪ್ರಕಿಯೆ
ಕೃಪೆ: ಪಿಟಿಐ
ಘಾಜಿಯಾಬಾದ್: ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಕರ್ತವ್ಯ ನಿರ್ವಹಣೆ ವೇಳೆ ಬೇಜವಾಬ್ದಾರಿ ತೋರಿದ 21 ಮಂದಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್ಒ) ವಿರುದ್ಧ ಗುರುವಾರ ಪ್ರಕರಣ ದಾಖಲಾಗಿದೆ.
ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ರವೀಂದ್ರ ಕುಮಾರ್ ಮಂದರ್ ಅವರ ನಿರ್ದೇಶನದಂತೆ ಉಪ ತಹಷೀಲ್ದಾರ್ ಅಲೋಕ್ ಕುಮಾರ್ ಯಾದವ್ ಅವರು ಶಿಹಾನಿ ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 32ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ನಂದಗ್ರಾಮ್ ಹೆಚ್ಚುವರಿ ಪೊಲೀಸ್ ಆಯುಕ್ತ ಉಪಾಸನ ಪಾಂಡೆ ಖಚಿತಪಡಿಸಿದ್ದಾರೆ.
ಎಸ್ಐಆರ್ ಕರ್ತವ್ಯಕ್ಕಾಗಿ ಸರ್ಕಾರದ ವಿವಿಧ ಇಲಾಖೆಗಳಿಂದ ನಿಯೋಜನೆಗೊಂಡಿದ್ದ ಬಿಎಲ್ಒಗಳು, ತಮಗೆ ವಹಿಸಿದ್ದ ಪ್ರದೇಶಗಳಲ್ಲಿ ಅರ್ಜಿ ವಿತರಣೆ ಹಾಗೂ ಸಂಗ್ರಹದಂತಹ ಅತ್ಯಂತ ಮಹತ್ವದ ಕಾರ್ಯ ನಿರ್ವಹಿಸಲು ವಿಫಲವಾಗಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಅವರ (ಬಿಎಲ್ಒಗಳ) ಅಜಾಗರೂಕತೆಯಿಂದಾಗಿ ಪರಿಷ್ಕರಣಾ ಪ್ರಕ್ರಿಯೆಯ ಪ್ರಗತಿಗೆ ಹಿನ್ನಡೆಯಾಗಿದೆ ಎಂದೂ ಹೇಳಲಾಗಿದೆ.
ಚುನಾವಣಾ ಆಯೋಗದ ವಹಿಸಿದ್ದ ಕಡ್ಡಾಯ ಕರ್ತವ್ಯದಲ್ಲಿ ಲೋಪವೆಸಗಿರುವುದನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.