
ಚುನಾವಣಾ ಆಯೋಗ
ಪಿಟಿಐ ಚಿತ್ರ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದಂತೆ ಹಲವು ಮಂದಿ ಮೃತಪಟ್ಟಿದ್ದು, 'ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಕೈಗಳಿಗೆ ರಕ್ತದ ಕಲೆ ಅಂಟಿದೆ' ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಆರೋಪಿಸಿದೆ.
ಶುಕ್ರವಾರ ಇಲ್ಲಿ ಟಿಎಂಸಿ ರಾಜ್ಯಸಭಾ ಮುಖಂಡ ಡೆರಿಕ್ ಒಬ್ರಿಯಾನ್ ನೇತೃತ್ವದ 10 ಸದಸ್ಯರ ನಿಯೋಗವು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ‘ಎಸ್ಐಆರ್ ಬಗ್ಗೆ ಮಾತುಕತೆ ನಡೆಸಿತು.
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ (ಎಸ್ಐಆರ್) ಸಂಬಂಧಿಸಿ, ಕನಿಷ್ಠ 40 ಸಾವುಗಳು ಸಂಭವಿಸಿವೆ. ‘ಮುಖ್ಯ ಚುನಾವಣಾ ಆಯುಕ್ತರ (ಸಿಇಸಿ) ಕೈಗಳಿಗೆ ರಕ್ತದ ಕಲೆಗಳು ಅಂಟಿವೆ’ ಎಂದು ಟಿಎಂಸಿ ಗಂಭೀರ ಆರೋಪ ಮಾಡಿದೆ.
ಸಂಸದೆ ಮಹುವಾ ಮೊಯಿತ್ರಾ, ಶತಾಬ್ದಿ ರಾಯ್, ಕಲ್ಯಾಣ್ ಬ್ಯಾನರ್ಜಿ, ಪ್ರತಿಮಾ ಮಂಡಲ್, ಸಜ್ದಾ ಅಹಮದ್, ಡೋಲಾ ಸೇನ್, ಮಮತಾ ಠಾಕೂರ್, ಸಾಕೇತ್ ಗೋಖಲೆ ಮತ್ತು ಪ್ರಕಾಶ್ ಚಿಕ್ ಬರಿಕ್ ನಿಯೋಗದಲ್ಲಿದ್ದರು.
ಆಯೋಗದ ಅಧಿಕಾರಿಗಳನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡೆರಿಕ್ ಒಬ್ರಿಯಾನ್, ‘ನಾವು ಸಿಇಸಿ ಅವರ ಕೈಗಳಿಗೆ ರಕ್ತದ ಕಲೆ ಅಂಟಿದೆ ಎಂಬ ಆರೋಪದ ಮೂಲಕವೇ ಮಾತುಕತೆ ಆರಂಭಿಸಿದೆವು. ಸಿಇಸಿ ಜ್ಞಾನೇಶ್ ಕುಮಾರ್ ಎದುರು ಐದು ಪ್ರಶ್ನೆಗಳನ್ನು ಇರಿಸಿದೆವು. ಅವರು ನಮ್ಮೊಂದಿಗೆ ಒಂದು ಗಂಟೆ ಮಾತನಾಡಿದರು. ಆದರೆ, ನಮ್ಮ ಯಾವ ಪ್ರಶ್ನೆಗೂ ಅವರು ಉತ್ತರ ನೀಡಲಿಲ್ಲ’ ಎಂದರು.
‘ಎಸ್ಐಆರ್’ ಒತ್ತಡದ ಕಾರಣದಿಂದಾಗಿಯೇ 40 ಜನರ ಸಾವಿಗೆ ಸಂಬಂಧಿಸಿದ ಪಟ್ಟಿಯನ್ನು ನಾವು ಆಯೋಗದ ಜತೆಗೆ ಹಂಚಿಕೊಂಡಿದ್ದೇವೆ’ ಎಂದು ಸಂಸದೆ ಮಹುವಾ ಮೊಯಿತ್ರಾ ಹೇಳಿದರು.
‘ನಾವು ‘ಎಸ್ಐಆರ್’ ವಿರೋಧಿಸುತ್ತಿಲ್ಲ. ಆದರೆ, ಯಾವುದೇ ಸಿದ್ಧತೆ, ಯೋಜನೆ ಇಲ್ಲದೆ ರಾಜ್ಯದಲ್ಲಿ ಇದನ್ನು ಜಾರಿಗೊಳಿಸಲು ಮುಂದಾಗಿರುವ ಚುನಾವಣಾ ಆಯೋಗ ಮತ್ತು ಮುಖ್ಯ ಚುನಾವಣಾ ಆಯುಕ್ತರ ಕಾರ್ಯವನ್ನು ಬಲವಾಗಿ ವಿರೋಧಿಸುತ್ತೇವೆ. ಎಸ್ಐಆರ್ ವಿಷಯದಲ್ಲಿ ಆಯೋಗವು ನಿಷ್ಕರುಣಿಯಾಗಿದೆ’ ಎಂದು ಡೆರಿಕ್ ಒಬ್ರಿಯಾನ್ ದೂರಿದರು.
ಪಶ್ಚಿಮ ಬಂಗಾಳ ಸೇರಿದಂತೆ 9 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.