ADVERTISEMENT

ಎಲ್ಗಾರ್ ಪ್ರಕರಣ| ಆರೋಪಿಗಳು ಮೋದಿ ಸರ್ಕಾರ ಉರುಳಿಸಲು ಬಯಸಿದ್ದರು: ನ್ಯಾಯಾಲಯ

ಪಿಟಿಐ
Published 19 ಫೆಬ್ರುವರಿ 2022, 4:04 IST
Last Updated 19 ಫೆಬ್ರುವರಿ 2022, 4:04 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಎಲ್ಗಾರ್ ಪರಿಷತ್ ಪ್ರಕರಣದ ಮೂವರು ಆರೋಪಿಗಳಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಜಾಮೀನು ನಿರಾಕರಿಸಿದೆ.

ಕಬೀರ್ ಕಲಾ ಮಂಚ್‌ಗೆ ಸೇರಿದ ಮೂವರು ಆರೋಪಿಗಳಾದ ಸಾಗರ್ ಗೋರ್ಖೆ, ರಮೇಶ್ ಗೈಚೋರ್ ಮತ್ತು ಜ್ಯೋತಿ ಜಗತಾಪ್ ಅವರಿಗೆ ವಿಶೇಷ ಎನ್‌ಐಎ ನ್ಯಾಯಾಲಯದ ನ್ಯಾಯಾಧೀಶ ಡಿ.ಇ. ಕೊತಾಲಿಕರ್ ಸೋಮವಾರ ಜಾಮೀನು ನಿರಾಕರಿಸಿದರು. ವಿವರವಾದ ಆದೇಶ ಗುರುವಾರ ಹೊರಬಿದ್ದಿದೆ.

ಈ ಮೂವರುನಿಷೇಧಿತ ಸಂಘಟನೆ ಸಿಪಿಐನ (ಮಾವೋವಾದಿ) ಇತರ ಸದಸ್ಯರೊಡಗೂಡಿ ದೇಶದಲ್ಲಿ ಅಶಾಂತಿ ಸೃಷ್ಟಿಸಲು ಮತ್ತು ಮೋದಿ ಸರ್ಕಾರ ಉರುಳಿಸಲು ಗಂಭೀರ ಸಂಚು ರೂಪಿಸಿರುವುದನ್ನು ಸ್ಥಳದಲ್ಲಿ ದೊರೆತ ದಾಖಲೆಯಲ್ಲಿರುವ ವಿಷಯವು ಸೂಚಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ADVERTISEMENT

‘ಸಿಪಿಐ (ಮಾವೋವಾದಿ) ‘ಮೋದಿ ರಾಜ್’ ಅನ್ನು ಕೊನೆಗೊಳಿಸಲು ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋಗಳನ್ನು ಗುರಿಯಾಗಿಸಿಕೊಂಡು ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಸಾವಿನಂತಹ ಇನ್ನೊಂದು ಘಟನೆಯ ಬಗ್ಗೆಯೂ ನಕ್ಸಲರು ಯೋಚಿಸುತ್ತಿದ್ದಾರೆ ಎಂಬುದು ಸ್ಥಳದಲ್ಲಿ ದೊರೆತ ಪ್ರಾಥಮಿಕ ದಾಖಲೆಯಾದ ಆ ಪತ್ರದಲ್ಲಿದೆ’ ಎಂದು ಕೋರ್ಟ್ ಹೇಳಿದೆ.

‘ಆರೋಪಿಗಳು ನಿಷೇಧಿತ ಸಂಘಟನೆ ಸಿಪಿಐ (ಮಾವೋವಾದಿ) ಸದಸ್ಯರಷ್ಟೇ ಅಲ್ಲ, ಅವರು ಸಂಘಟನೆಯ ಉದ್ದೇಶಕ್ಕಾಗಿ ಮತ್ತಷ್ಟು ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂಬುದು ಪ್ರಾಥಮಿಕದಾಖಲೆಯಲ್ಲಿದೆ. ಇದು ದೇಶದ ಪ್ರಜಾಪ್ರಭುತ್ವವನ್ನು ಉರುಳಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ’ ಎಂದು ನ್ಯಾಯಾಲಯ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.