ಕೋಲ್ಕತ್ತ: ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಕೇಂದ್ರ ಗೃಹ ಸಚಿವಾಲಯ ನೀಡಿರುವ ನೋಟಿಸ್ಗೆ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರು ಉತ್ತರಿಸಿದ್ದಾರೆ.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರ್ದೇಶನದಂತೆ ಯಸ್ ಚಂಡಮಾರುತದಿಂದ ಹಾನಿಗೊಳಗಾದ ಪುರ್ಬಾ ಮೆದಿನಿಪುರ್ ಜಿಲ್ಲೆಯ ಜನಪ್ರಿಯ ಸಮುದ್ರ ರೆಸಾರ್ಟ್ ಪಟ್ಟಣ ದಿಘಾ ಪ್ರದೇಶದ ಪರಿಶೀಲನೆಗಾಗಿ ಸಭೆಯಿಂದ ಹೊರನಡೆದಿದ್ದರು ಎಂದು ಉತ್ತರಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚಂಡಮಾರುತ ಅವಲೋಕನ ಸಭೆಯಿಂದ ಗೈರುಹಾಜರಾಗಿರುವುದಕ್ಕೆ ಸಂಬಂಧಿಸಿದಂತೆ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿಯಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಆಲಾಪನ್ ಬಂದೋಪಾಧ್ಯಾಯ ಅವರ ವಿರುದ್ಧ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.
ಇದನ್ನೂ ಓದಿ:ಸರ್ಕಾರದ ಅಕ್ರಮ ತಿಳಿದಿರುವ ಆಲಾಪನ್ ಅವರನ್ನು ಮಮತಾ ರಕ್ಷಿಸುತ್ತಿದ್ದಾರೆ: ಸುವೇಂದು
ಆಲಾಪನ್ ಅವರು ಮೇ 31ರಂದು ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಬೇಕಿತ್ತು. ಆದರೆ ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಕರ್ತವ್ಯ ನಿಭಾಯಿಸಿರುವ ಬಂದೋಪಾಧ್ಯಾಯ ಅವರ ಸೇವೆಯನ್ನು ಮೂರು ತಿಂಗಳು ವಿಸ್ತರಿಸಿ ಕೇಂದ್ರ ಸರ್ಕಾರವು ಆದೇಶ ಹೊರಡಿಸಿತ್ತು.
ಆದರೆ ಮೇ 28ರಂದು ಕೇಂದ್ರ ಸರ್ಕಾರವು ಹೊರಡಿಸಿದ್ದ ಆದೇಶದ ಪ್ರಕಾರ ಆಲಾಪನ್ ಅವರು ಕೇಂದ್ರ ಸೇವೆಗೆ ಹಾಜರಾಗಬೇಕಿತ್ತು. ಆದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆ ಮಾಡದ ಕಾರಣ ಕೇಂದ್ರ ಸೇವೆಗೆ ಹಾಜರಾಗಿರಲಿಲ್ಲ.
ಈ ಮಧ್ಯೆ ಕಲೈಕುಂಡ ವಾಯುನೆಲೆಯಲ್ಲಿ ಪ್ರಧಾನ ಮಂತ್ರಿಯ ಚಂಡುಮಾರುತ ಪರಿಶೀಲನಾ ಸಭೆಯಿಂದಲೂ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಗೈರಾಗಿದ್ದರು. ಬ್ಯಾನರ್ಜಿ ಅವರು ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಕೇವಲ 15 ನಿಮಿಷಗಳ ಕಾಲ ಪ್ರಧಾನಿ ಅವರನ್ನು ಭೇಟಿಯಾಗಿ ಚಂಡಮಾರುತದಿಂದ ಉಂಟಾದ ವಿನಾಶದ ವರದಿಯನ್ನು ಹಸ್ತಾಂತರಿಸಿ ಹೊರಟು ಹೋಗಿದ್ದರು.
ಕೇಂದ್ರ-ರಾಜ್ಯ ಸರ್ಕಾರದ ತಿಕ್ಕಾಟದ ನಡುವೆ ಬಂದೋಪಾಧ್ಯಾಯ ನಿವೃತ್ತಿಯನ್ನು ಘೋಷಿಸಿರುವ ಮಮತಾ ಬ್ಯಾನರ್ಜಿ, ರಾಜ್ಯದ ಮುಖ್ಯ ಸಲಹೆಗಾರನಾಗಿ ನೇಮಕಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.