ADVERTISEMENT

'ಕರಾಚಿ' ಮುಂದೊಂದು ದಿನ ಭಾರತದ ಭಾಗವಾಗಲಿದೆ: ದೇವೇಂದ್ರ ಫಡಣವಿಸ್‌

ಕರಾಚಿ ಸ್ವೀಟ್ಸ್‌ ಮಳಿಗೆ ಹೆಸರು ಬದಲಿಸುವ ವಿಚಾರ

ಏಜೆನ್ಸೀಸ್
Published 23 ನವೆಂಬರ್ 2020, 14:18 IST
Last Updated 23 ನವೆಂಬರ್ 2020, 14:18 IST
ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌
ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌   

ಮುಂಬೈ: ತಮ್ಮ ಪಕ್ಷ 'ಅಖಂಡ ಭಾರತದಲ್ಲಿ' ನಂಬಿಕೆ ಇಟ್ಟಿರುವುದಾಗಿ ಹೇಳಿರುವ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌, 'ಕರಾಚಿ' ಒಂದು ದಿನ ಭಾರತದ ಭಾಗವಾಗಲಿದೆ ಎಂದಿದ್ದಾರೆ.

ಬಾಂದ್ರಾದಲ್ಲಿರುವ 'ಕರಾಚಿ' ಸಿಹಿ ತಿನಿಸು ಮಳಿಗೆಗಳ ಹೆಸರು ಬದಲಿಸುವಂತೆ ಶಿವಸೇನಾ ಮುಖಂಡ ಅಂಗಡಿ ಮಾಲೀಕರನ್ನು ಒತ್ತಾಯಿಸಿರುವ ಘಟನೆಗೆ ಸಂಬಂಧಿಸಿದಂತೆ ಕೇಳಲಾಗಿರುವ ಪ್ರಶ್ನೆಗೆ ಫಡಣವಿಸ್‌ ಭಾನುವಾರ ಪ್ರತಿಕ್ರಿಯಿಸಿದ್ದಾರೆ.

'ಅಖಂಡ ಭಾರತದಲ್ಲಿ ನಮಗೆ ನಂಬಿಕೆ ಇದೆ. ಕರಾಚಿಯು ಮುಂದೊಂದು ದಿನ ಭಾರತದ ಭಾಗವಾಗಲಿದೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.

ADVERTISEMENT

ಫಡಣವಿಸ್‌ ಹೇಳಿಕೆಗೆ ಪ್ರತಿಕ್ರಿಯಿಸಿರುವ, ಶಿವಸೇನಾ ಸಂಸದ ಸಂಜಯ್‌ ರಾವತ್, 'ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ತನ್ನಿ. ಅನಂತರ ನಾವು ಕರಾಚಿ ಹೋಗಬಹುದು' ಎಂದು ಸವಾಲು ಹಾಕಿದ್ದಾರೆ.

ಶಿವಸೇನಾ ಮುಖಂಡ ನಿತಿನ್‌ ಮಧುಕರ್‌ ನಂದಗಾವಂಕರ್‌ ಅವರು ಕರಾಚಿ ಸಿಹಿ ತಿನಿಸು ಮಳಿಗೆಯ ಮಾಲೀಕರಿಗೆ ಮಳಿಗೆಯ ಹೆಸರು ಬದಲಿಸುವಂತೆ ತಾಕೀತು ಮಾಡಿರುವ ವಿಡಿಯೊ ಇತ್ತೀಚೆಗಷ್ಟೇ ವೈರಲ್‌ ಆಗಿತ್ತು. 'ನೀವು ಇದನ್ನು ಮಾಡಲೇಬೇಕು. ನಾವು ನಿಮಗೆ ಸಮಯ ಕೊಡುತ್ತಿದ್ದೇವೆ. ಕರಾಚಿ ಬದಲಾಗಿ ಮರಾಠಿಯಲ್ಲಿ ಯಾವುದೇ ಹೆಸರು ಇರಲಿ' ಎಂದು ನಿತಿನ್ ಮಧುಕರ್ ಹೇಳಿರುವುದು ವಿಡಿಯೊದಲ್ಲಿದೆ ಎಂದು ಎಎನ್‌ಐ ವರದಿ ಮಾಡಿದೆ.

ಆ ಘಟನೆ ಕುರಿತು ಪ್ರತಿಕ್ರಿಯಿಸಿದ್ದ ಶಿವಸೇನಾ ಸಂಸದ ಸಂಜಯ್‌ ರಾವತ್, 'ಮಳಿಗೆಯ ಹೆಸರು ಬದಲಿಸಬೇಕೆಂಬುದು ಪಕ್ಷದ ಅಧಿಕೃತ ನಿಲುವಲ್ಲ' ಎಂದಿದ್ದರು.

'ಕರಾಚಿ ಬೇಕರಿ ಮತ್ತು ಕರಾಚಿ ಸ್ವೀಟ್ಸ್‌ ಕಳೆದ 60 ವರ್ಷಗಳಿಂದ ಮುಂಬೈನಲ್ಲಿದೆ. ಪಾಕಿಸ್ತಾನಕ್ಕೂ ಅದಕ್ಕೂ ಸಂಬಂಧವಿಲ್ಲ. ಈಗ ಅವುಗಳ ಹೆಸರು ಬದಲಿಸಬೇಕೆಂದು ಕೇಳುವುದರಲ್ಲಿ ಯಾವುದೇ ಅರ್ಥವಿಲ್ಲ. ಹೆಸರು ಬದಲಿಸಲು ಒತ್ತಾಯಿಸಿರುವುದು ಶಿವಸೇನೆಯ ಅಧಿಕೃತ ನಿಲುವಲ್ಲ' ಎಂದು ಸಂಜಯ್‌ ರಾವತ್ ಟ್ವೀಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.