ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರೈತರಿಗೆ ಪದೇಪದೇ ವಿಶ್ವಾಸದ್ರೋಹ ಎಸಗಿದೆ. ಹೀಗಾಗಿ, ರೈತರು ದೆಹಲಿಗೆ ಬಂದು ನ್ಯಾಯಕ್ಕಾಗಿ ಹೋರಾಡುತ್ತಿದ್ದು, ಅವರ ಧ್ವನಿ ಅಡಗಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದ್ದಾರೆ.
‘ಎಕ್ಸ್’ನಲ್ಲಿ ಈ ಬಗ್ಗೆ ಪೋಸ್ಟ್ ಹಂಚಿಕೊಂಡಿರುವ ಅವರು, ‘ರೈತರು ಪದೇಪದೇ ದೆಹಲಿಗೆ ಬಂದು ನ್ಯಾಯಕ್ಕಾಗಿ ಹೋರಾಡುವ ಅಗತ್ಯವೇನಿದೆ ಎಂಬುದರ ಅರಿವಿದೆಯೇ’ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.
‘2022ರ ವೇಳೆಗೆ ರೈತರ ಆದಾಯ ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದಿರಿ. ಸ್ವಾಮಿನಾಥನ್ ಆಯೋಗದ ಶಿಫಾರಸಿನಂತೆ, ಉತ್ಪಾದನಾ ವೆಚ್ಚದ ಜೊತೆಗೆ ಶೇ 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ನಿಗದಿಪಡಿಸುವುದಾಗಿ ಹಾಗೂ ಎಂಎಸ್ಪಿಗೆ ಕಾನೂನು ಮಾನ್ಯತೆ ನೀಡುವುದಾಗಿಯೂ ಹೇಳಿದ್ದಿರಿ. ಆದರೆ ಈ ಯಾವ ಆಶ್ವಾಸನೆಗಳನ್ನೂ ಕೇಂದ್ರ ಸರ್ಕಾರ ಈಡೇರಿಸಿಲ್ಲ. ಹೀಗಾಗಿಯೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಖರ್ಗೆ ಹೇಳಿದ್ದಾರೆ.
ಕೃಷಿ ಉತ್ಪನ್ನಗಳಿಗೆ ನ್ಯಾಯಯುತವಾದ ಬೆಲೆ ಸಿಗುತ್ತಿಲ್ಲ. ಅದಕ್ಕೂ ಮೀರಿ, ದೇಶದಲ್ಲಿ ಡಿಎಪಿ ಸೇರಿ ರಸಗೊಬ್ಬರಗಳ ತೀವ್ರ ಅಭಾವ ಉಂಟಾಗಿದೆ ಎಂದು ಖರ್ಗೆ ದೂರಿದ್ದಾರೆ.
ರೈತರ ಹಾದಿಗೆ ಮುಳ್ಳುತಂತಿಯ ಬಲೆ: ರಾಷ್ಟ್ರ ರಾಜಧಾನಿ ದೆಹಲಿಗೆ ಶಾಂತಿಯುತ ಮೆರವಣಿಗೆ ಕೈಗೊಂಡಿರುವ ರೈತರನ್ನು ತಡೆಯಲು ದೆಹಲಿಯ ಹೊರಭಾಗದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ರೈತರ ಹಾದಿಗೆ ಮುಳ್ಳುತಂತಿಯ ಬಲೆ ಹಾಸಿ, ಅವರ ಮೇಲೆ ಅಶ್ರುವಾಯು ಸಿಡಿಸಿ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸಲಾಗುತ್ತಿದೆ ಎಂದು ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.