ನವದೆಹಲಿ: ‘ಒಂದು ಹೊತ್ತಿನ ಊಟ ತ್ಯಜಿಸುವ ಮೂಲಕ ರೈತರ ದಿನಾಚರಣೆ, ಮಾಜಿ ಪ್ರಧಾನಿ ಚರಣ್ಸಿಂಗ್ ಜನ್ಮದಿನವನ್ನು ಆಚರಿಸಿ. ವಿವಾದಿತ ಕೃಷಿ ಕಾಯ್ದೆಗಳ ರದ್ಧತಿಗಾಗಿ ನಡೆಸುತ್ತಿರುವ ನಮ್ಮ ಹೋರಾಟವನ್ನು ಬೆಂಬಲಿಸಿ' ಎಂದು ದೆಹಲಿಯ ಗಡಿಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ಸಾವಿರಾರು ರೈತರು ದೇಶದ ನಾಗರಿಕರನ್ನು ಒತ್ತಾಯಿಸಿದ್ದಾರೆ.
ಡಿ.23, 'ರೈತರ ದಿನ‘ ಹಾಗೂ ರೈತ ಸ್ನೇಹಿ ನೀತಿಗಳನ್ನು ನೀಡಿದ ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನ. ಇದರ ಅಂಗವಾಗಿ ಬುಧವಾರ ದೆಹಲಿಯ ಘಾಜಿಪುರ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಹೋಮ ನಡೆಸಿದರು. ನಂತರ ‘ಕಿಸಾನ್ ಘಾಟ್‘ನಲ್ಲಿರುವ ಚೌಧರಿ ಚರಣ್ ಸಿಂಗ್ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.
‘ಕಿಸಾನ್ ದಿವಸ್ ಅಂಗವಾಗಿ ಚರಣ್ ಸಿಂಗ್ ಅವರಿಗೆ ಗೌರವ ಸಲ್ಲಿಸಲು ರೈತರು ಇಲ್ಲಿಗೆ ಬಂದಿದ್ದಾರೆ. ಶೀಘ್ರದಲ್ಲೇ ಹೊರಡುತ್ತಾರೆ‘ ಎಂದು ಕಿಸಾನ್ ಘಾಟ್ನಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈತರ ನಾಯಕ ಕುಲ್ವಂತ್ ಸಿಂಗ್ ಸಂಧು, ‘ಪಂಜಾಬ್ನ 32 ರೈತ ಸಂಘಟನೆಗಳು ಮಂಗಳವಾರ ಸಭೆ ನಡೆಸಿ, ಮುಂದಿನ ಪ್ರಕ್ರಿಯೆಗಳ ಕುರಿತು ಚರ್ಚೆ ನಡೆಸಿವೆ' ಎಂದು ಹೇಳಿದರು.
ವಿವಿಧ ರಾಜ್ಯಗಳ ರೈತ ಮುಖಂಡರ ಸಭೆ ಬುಧವಾರ ನಡೆಯಲಿದ್ದು, ಸರ್ಕಾರದ ಜತೆ ಮಾತುಕತೆ ನಡೆಸುವ ಕುರಿತು ಚರ್ಚೆ ನಡೆಯಲಿದೆ. ಅಂತಿಮ ನಿರ್ಧಾರವನ್ನೂ ತೆಗೆದುಕೊಳ್ಳಬಹುದೆಂಬ ನಿರೀಕ್ಷೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.