ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್
ಮುಂಬೈ: ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ವೇನ ಅಂತಿಮ 76 ಕಿ.ಮೀ ಮಾರ್ಗವನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಗುರುವಾರ ಉದ್ಘಾಟಿಸಿದರು.
ಈ ಮೂಲಕ ಒಟ್ಟು 701 ಕಿ.ಮೀ ಮಾರ್ಗದ ‘ಸಮೃದ್ಧಿ ಮಹಾಮಾರ್ಗವು’ ಸಂಚಾರಕ್ಕೆ ಮುಕ್ತಗೊಂಡಿದೆ. ಅಂದಾಜು 17ರಿಂದ 18 ಗಂಟೆ ತೆಗೆದುಕೊಳ್ಳುತ್ತಿದ್ದ ಮುಂಬೈ-ನಾಗ್ಪುರ ನಗರಗಳ ನಡುವಿನ ಪ್ರಯಾಣದ ಅವಧಿಯು ಎಕ್ಸ್ಪ್ರೆಸ್ವೇನಿಂದಾಗಿ 8 ಗಂಟೆಗೆ ಇಳಿದಿದೆ.
ಆರು ಪಥಗಳ ಈ ಹೆದ್ದಾರಿಗೆ ‘ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್’ ಎಂದು ಹೆಸರಿಡಲಾಗಿದೆ. ಶೀಘ್ರದಲ್ಲೇ ಈ ಮಾರ್ಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಹಾರಾಷ್ಟ್ರ ರಸ್ತೆ ಸಾರಿಗೆ ನಿಗಮ (ಎಂಎಸ್ಆರ್ಡಿಸಿ) ಹೇಳಿದೆ.
ರಸ್ತೆ ಉದ್ಘಾಟನೆಯ ಬಳಿಕ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಮತ್ತು ಪವಾರ್ ಅವರೊಂದಿಗೆ ಈ ಮಾರ್ಗದಲ್ಲಿ ಕಾರಿನಲ್ಲಿ ಪ್ರಯಾಣಿಸಿದರು. ಇಗಟಾಪುರಿ ಸುರಂಗ ಮಾರ್ಗ ಪರಿಶೀಲಿಸಿದರು. ಏಕನಾಥ ಶಿಂದೆ ಕಾರು ಚಾಲನೆ ಮಾಡಿದರು. ಸುರಂಗ ಮಾರ್ಗ ಪರಿಶೀಲನೆಯೂ ಸೇರಿ ಎಕ್ಸ್ಪ್ರೆಸ್ವೇನಲ್ಲಿ 76 ಕಿ.ಮೀ ಮಾರ್ಗವನ್ನು 45 ನಿಮಿಷದಲ್ಲಿ ಕ್ರಮಿಸಿದರು.
10 ಜಿಲ್ಲೆಗಳ 26 ತಾಲ್ಲೂಕುಗಳ, 392 ಗ್ರಾಮಗಳ ಮೂಲಕ ಸಮೃದ್ಧಿ ಎಕ್ಸ್ಪ್ರೆಸ್ವೇ ಹಾದುಹೋಗಲಿದೆ. ಸಮೃದ್ಧಿ ಮಹಾಮಾರ್ಗದ ಮೊದಲ ಹಂತದ ನಾಗಪುರ–ಶಿರಡಿ ನಡುವಿನ 520 ಕಿ.ಮೀ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ 2022ರಲ್ಲಿ ಚಾಲನೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.