ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂತೆಗೆದುಕೊಂಡ ನಂತರ ಕಣಿವೆ ರಾಜ್ಯದಲ್ಲಿ ಭದ್ರತಾ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ ತಡೆಯಲು ವಿಶ್ವಸಂಸ್ಥೆ (ಯುಎನ್) ಮಧ್ಯಸ್ಥಿಕೆ ವಹಿಸುವಂತೆ ಮೊದಲ ಬಾರಿಗೆ ಹುರಿಯತ್ ಕಾನ್ಫರೆನ್ಸ್ ಗುರುವಾರ ಮನವಿ ಮಾಡಿದೆ.
ಮಿರ್ವೈಜ್ ಉಮೇರ್ ಫಾರೂಕ್ ನೇತೃತ್ವದ ಹುರಿಯತ್ ವಕ್ತಾರ ಹೇಳಿಕೆ ನೀಡಿದ್ದು, ‘ಜನರನ್ನು ಹಿಂಸಿಸಲು ಮತ್ತು ಭಯ ಮೂಡಿಸಲು ಬಂಧನವನ್ನು ಆಯುಧವಾಗಿ ಮಾಡಿಕೊಳ್ಳಲಾಗಿದೆ. ಧಾರ್ಮಿಕ ವಿದ್ವಾಂಸರು ಸೇರಿದಂತೆ ನೂರಾರು ಕಾಶ್ಮೀರಿಗಳು ತಮ್ಮ ವಯಸ್ಸು ಮತ್ತು ಹಿನ್ನೆಲೆ ಲೆಕ್ಕಿಸದೆ, ವಿಚಾರಣೆ ವಿಳಂಬದಿಂದ ಕಠಿಣ ಕಾನೂನುಗಳ ಅಡಿ ಜೈಲು ಮತ್ತು ಬಂಧನ ಕೇಂದ್ರಗಳಲ್ಲಿ ಕೊಳೆಯುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಹಲವು ಕೈದಿಗಳ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ಇತ್ತೀಚಿನ ದಿನಗಳಲ್ಲಿ ಕೆಲವರ ಸಾವಿಗೆ ಕಾರಣವಾಗುವ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.ಬಂಧಿತರ ಬಿಡುಗಡೆಗಾಗಿ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.
ರಾಂಬನ್ನಿಂದ ಬಂಧಿತರಾದ ಐವರು ಯುವಕರ ವಿರುದ್ಧ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್ಎ) ಪ್ರಕರಣ ದಾಖಲಿಸಿದ್ದು ಹಾಗೂ ಹರ್ಮೈನ್ನ ಮತ್ತೊಬ್ಬ ಯುವಕ ಇಮ್ರಾನ್ ಬಶೀರ್ ಗನಿ ಎಂಬಾತನನ್ನು ‘ಹೈಬ್ರಿಡ್ ಉಗ್ರಗಾಮಿ’ ಎಂದು ಆರೋಪಿಸಿ, ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಕೊಲೆ ಮಾಡಲಾಗಿದೆ. ಮಾನವ ಹಕ್ಕುಗಳ ಉಲ್ಲಂಘನೆಯ ಗಂಭೀರ ಪ್ರಶ್ನೆಗಳನ್ನು ಎತ್ತಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದೇ ರೀತಿ, ಜಮ್ಮು, ಕಾಶ್ಮೀರದ ಯುವಕರನ್ನು ಬಂಧಿಸಿ, ‘ಭಯೋತ್ಪಾದಕರು ಮತ್ತು ಉಗ್ರಗಾಮಿ ಸಹಾನುಭೂತಿಗಳು’ ಎಂಬ ಹಣೆಪಟ್ಟಿ ಹಾಕಲಾಗಿದೆ. ಕಠಿಣ ಸಾರ್ವಜನಿಕ ಸುರಕ್ಷತಾ ಕಾಯಿದೆ (ಪಿಎಸ್ಎ) ಪ್ರಕರಣ ದಾಖಲಿಸಲಾಗಿದೆ.
ಈ ಅನ್ಯಾಯ ಪ್ರಶ್ನಿಸಲು ಮತ್ತು ವಿರೋಧಿಸಲು ಯಾವುದೇ ಧ್ವನಿ ಎತ್ತಲು ಅವಕಾಶವಿಲ್ಲ. ಕಠಿಣ ಕಾನೂನು ಮಾರ್ಗದ ಮೂಲಕವೂ ನ್ಯಾಯದ ಭರವಸೆ ಮಂಕಾಗಿದೆ ಎಂದು ಹೇಳಿದೆ.
‘ಕಾಶ್ಮೀರ ಸಂಘರ್ಷ ಪರಿಹರಿಸಬೇಕಾಗಿದೆ’ ಎಂಬ ಹೇಳಿಕೆಯನ್ನು ಹುರಿಯತ್ ಪುನರುಚ್ಚರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.