ಸೇಲಂ: ತಮಿಳುನಾಡಿನ ಡಿಎಂಕೆಮಾಜಿ ಸಂಸದ ಕೆ ಅರ್ಜುನನ್ ಕರ್ತವ್ಯ ನಿರತ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ.
ಭಾನುವಾರ ರಾತ್ರಿ ಸೇಲಮ್ನ ಚೆಕ್ಪೋಸ್ಟ್ನಲ್ಲಿ ಈ ಘಟನೆ ನಡೆದಿದೆ.
ತಮಿಳುನಾಡಿನಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಅಲ್ಲಿನ ಕೆಲ ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೊಳಿಸಲಾಗಿದೆ. ಈ ಮಧ್ಯೆ ಕಾರಿನಲ್ಲಿ ಬಂದ ಅರ್ಜುನನ್ ಅವರ ಬಳಿ ಪೊಲೀಸರು ಲಾಕ್ಡೌನ್ ಇ–ಪಾಸ್ ಕೇಳಿದ್ದಾರೆ. ಆಗ ಪೊಲೀಸ್ ಅಧಿಕಾರಿ ಮತ್ತು ಅರ್ಜುನನ್ ನಡುವೆ ವಾಗ್ವಾದ ನಡೆದಿದೆ. ಆಗ ಅರ್ಜುನನ್ ಪೊಲೀಸ್ ಅಧಿಕಾರಿಯನ್ನು ಕುತ್ತಿಗೆ ಹಿಡಿದು ತಳ್ಳಿದ್ದಾರೆ. ಇದರಿಂದ ಕೋಪಗೊಂಡ ಪೊಲೀಸ್ ಅಧಿಕಾರಿಯೂ ಅರ್ಜುನನ್ ಅವರನ್ನು ತಳ್ಳಿದ್ದಾರೆ. ಆಗ ಅರ್ಜುನನ್ ಅಧಿಕಾರಿಗೆ ಕಾಲಿನಿಂದ ಒದ್ದಿದ್ದಾರೆ.
ಈ ಇಡೀ ಘಟನೆಯನ್ನು ಅಲ್ಲೇ ಇದ್ದವರು ವಿಡಿಯೊ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗೆ ಅರ್ಜುನನ್ ಕಾಲಿನಿಂದ ಒದ್ದಿರುವುದು ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ಘಟನೆ ಸಂಬಂಧ ಯಾರೂ ಈ ವರೆಗೆ ಪ್ರಕರಣ ದಾಖಲಿಸಿಲ್ಲ.
ಕೊರೊನಾ ವೈರಸ್ ಹಿನ್ನೆಲೆಯಲ್ಲಿ ತಮಿಳುನಾಡಿನಲ್ಲಿ ಲಾಕ್ಡೌನ್ ಕ್ರಮಗಳನ್ನು ಬಿಗಿಗೊಳಿಸಲಾಗಿದೆ. ಅಲ್ಲಿ ಈ ವರೆಗೆ82,275 ಕೋವಿಡ್–19 ಪ್ರಕರಣಗಳು ವರದಿಯಾಗಿವೆ.1079 ಮಂದಿ ಮೃತಪಟ್ಟಿದ್ದಾರೆ.
ತಮಿಳುನಾಡಿನ ತೂತುಕುಡಿಯಲ್ಲಿ ಲಾಕ್ಡೌನ್ ನಡುವೆಯೂಅಂಗಡಿ ತೆರೆದಿದ್ದ ಕಾರಣಕ್ಕೆ ಅಲ್ಲಿನ ಪೊಲೀಸರು ಅಪ್ಪ–ಮಗ ಇಬ್ಬರನ್ನು ಬಂಧಿಸಿದ್ದರು. ಆದರೆ, ಪೊಲೀಸ್ ಕಸ್ಟಡಿಯಲ್ಲಿರುವಾಗಲೇ ಇಬ್ಬರೂ ಮೃತಪಟ್ಟ ಘಟನೆ ಪೊಲೀಸ್ ಇಲಾಖೆಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಅದರ ನಡುವೆಯೇ ಸಂಸದ ಪೊಲೀಸ್ ಅಧಿಕಾರಿಗೆ ಕಾಲಿನಿಂದ ಒದ್ದ ಘಟನೆಯೂ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.