ಪಟ್ನಾ: ಕಾಂಗ್ರೆಸ್ ಯುವನಾಯಕ ಕನ್ಹಯ್ಯ ಕುಮಾರ್ ಅವರು ಬಿಹಾರದ ಪಶ್ಚಿಮ ಚಂಪಾರಣ್ಯ ಜಿಲ್ಲೆಯಿಂದ ಭಾನುವಾರ ಪಾದಯಾತ್ರೆ ಆರಂಭಿಸಿದ್ದಾರೆ. ‘ಪಲಾಯನ್ ರೋಕೊ, ನೌಕರಿ ಡೋ’(ವಲಸೆ ತಡೆಯಿರಿ, ಉದ್ಯೋಗ ನೀಡಿ) ಎಂಬ ಹೆಸರಿನಲ್ಲಿ, ಚಂಪಾರಣ್ಯ ಭಿತಿಹರ್ವ ಆಶ್ರಮದಿಂದ ಆರಂಭಗೊಂಡಿರುವ ಪಾದಯಾತ್ರೆ ಏಪ್ರಿಲ್ 15ರಂದು ಪಟ್ನಾದಲ್ಲಿ ಮುಕ್ತಾಯಗೊಳ್ಳಲಿದೆ.
1917ರಲ್ಲಿ ಮಹಾತ್ಮ ಗಾಂಧೀಜಿ ಅವರು ಚಂಪಾರಣ್ಯ ಸತ್ಯಾಗ್ರಹ ಆರಂಭಿಸಿದ ಸ್ಥಳದಿಂದಲೇ ಕನ್ಹಯ್ಯ ಕುಮಾರ್ ಪಾದಯಾತ್ರೆ ಆರಂಭಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪಾದಯಾತ್ರೆಯಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ.
‘ನಿಮ್ಮ ಪ್ರೀತಿ ಪಾತ್ರರಿಗೆ ನೀವು ಬರೆಯುವ ಪ್ರೇಮ ಪತ್ರಗಳು ಸೋರಿಕೆಯಾಗುವುದಿಲ್ಲ. ಆದರೆ ನಿತೀಶ್ ಆಡಳಿತದಲ್ಲಿ ಎಲ್ಲ ಪರೀಕ್ಷೆಯ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗುತ್ತವೆ. ಇದರಿಂದ ನೇಮಕಾತಿ ವಿಳಂಬವಾಗುತ್ತಿದೆ ಮತ್ತು ಯುವಕರು ಖಿನ್ನತೆಗೆ ಒಳಗಾಗಿ ವಲಸೆ ಹೋಗುವುದು ಹೆಚ್ಚಾಗುತ್ತಿದೆ’ ಎಂದು ಕನ್ಹಯ್ಯ ಕುಮಾರ್ ಆರೋಪಿಸಿದರು.
ಬಿಹಾರದಲ್ಲಿ ಈ ವರ್ಷದ ಅಕ್ಟೋಬರ್ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆರ್ಜೆಡಿಯೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.