ಹರಿದ್ವಾರ(ಉತ್ತರಾಖಂಡ): ಹರಿದ್ವಾರದ ಗಂಗಾನದಿಯ ನೀರು ಕುಡಿಯಲು ಯೋಗ್ಯವಲ್ಲ. ಸ್ನಾನಕ್ಕೆ ಸೂಕ್ತ ಎಂದು ಉತ್ತರಾಖಂಡ ಮಾಲಿನ್ಯ ನಿಯಂತ್ರಣ ಮಂಡಳಿ(ಯುಕೆಪಿಸಿಬಿ) ಹೇಳಿದೆ.
ಉತ್ತರ ಪ್ರದೇಶ ಗಡಿಯಲ್ಲಿ ಬರುವ ಗಂಗಾ ನದಿಯಲ್ಲಿ ಪ್ರತಿ ವರ್ಷ 8 ಕಡೆ ನೀರನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲಾಗುತ್ತದೆ.
ಇತ್ತೀಚಿನ ನವೆಂಬರ್ ತಿಂಗಳ ಪರೀಕ್ಷೆಯಲ್ಲಿ ಗಂಗಾ ನದಿಯ ನೀರು 'ಬಿ' ಕೆಟಗರಿ ಎಂದು ಕಂಡುಬಂದಿದೆ. ನದಿಯ ನೀರನ್ನು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. 'ಎ' ಕೆಟಗರಿ ಕನಿಷ್ಠ ವಿಷಕಾರಿಯಾಗಿದೆ. ಅಂದರೆ ನೀರನ್ನು ಸೋಂಕುನಿವಾರಣೆಗೊಳಿಸಿದ ನಂತರ ಕುಡಿಯಲು ಬಳಸಬಹುದು. 'ಇ' ಕೆಟಗರಿ ಅತ್ಯಂತ ವಿಷಕಾರಿಯಾಗಿದೆ.
ಎಎನ್ಐ ಜೊತೆ ಮಾತನಾಡಿರುವ ಯುಕೆಪಿಸಿಬಿಯ ಪ್ರಾದೇಶಿಕ ಅಧಿಕಾರಿ ರಾಜೇಂದ್ರ ಸಿಂಗ್, ‘ನಾಲ್ಕು ನಿಯತಾಂಕಗಳ (ಪಿಹೆಚ್, ಕರಗಿದ ಆಮ್ಲಜನಕ, ಜೈವಿಕ ಆಮ್ಲಜನಕ ಮತ್ತು ಒಟ್ಟು ಕೋಲಿಫಾರ್ಮ್ ಬ್ಯಾಕ್ಟೀರಿಯಾ) ಆಧಾರದ ಮೇಲೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ನೀರಿನ ಗುಣಮಟ್ಟವನ್ನು 5 ವರ್ಗಗಳಾಗಿ ವಿಂಗಡಿಸಿದೆ. ಈ ಮೂಲಕ ಗಂಗೆಯ ಗುಣಮಟ್ಟವು 'ಬಿ' ವರ್ಗದಲ್ಲಿದ್ದು, ಈ ನೀರು ಸ್ನಾನಕ್ಕೆ ಸೂಕ್ತವಾಗಿದೆ.
ಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಸ್ಥಳೀಯ ಅರ್ಚಕ ಉಜ್ಡಲ್ ಪಂಡಿತ್ ಸಹ ಕಳವಳ ವ್ಯಕ್ತಪಡಿಸಿದ್ದಾರೆ. ಮಾನವರ ತ್ಯಾಜ್ಯದಿಂದ ಗಂಗೆ ಮಲಿನಗೊಳ್ಳುತ್ತಿದ್ದಾಳೆ ಎಂದಿದ್ದಾರೆ.
‘ಕೇವಲ ಗಂಗಾಜಲದಿಂದ ಸ್ನಾನ ಮಾಡುವುದರಿಂದ ನಮ್ಮ ದೇಹದ ರೋಗಗಳು ವಾಸಿಯಾಗುತ್ತದೆ. ಅದರಿಂದ ಕ್ಯಾನ್ಸರ್ನಂತಹ ರೋಗಗಳು ವಾಸಿಯಾಗುತ್ತವೆ ಎಂಬ ನಂಬಿಕೆ ಇದೆ. ಈಗ ಗಂಗಾಜಲ ಅಶುದ್ಧವಾಗಿರುವುದಕ್ಕೆ ಮಾನವ ತ್ಯಾಜ್ಯದಿಂದ ಆಗಿದ್ದು, ಅದನ್ನು ನಾವು ಬದಲಾಯಿಸಬೇಕಾಗಿದೆ’ಎಂದು ಅವರು ಹೇಳಿದ್ದಾರೆ.
ದೇಶದ ನದಿಗಳ ಪೈಕಿ ವಿಶೇಷವಾಗಿ ದೆಹಲಿಯ ಯಮುನಾ ನದಿಯಲ್ಲಿ ಮಾಲಿನ್ಯವು ಕಳೆದ ಕೆಲವು ವರ್ಷಗಳಿಂದ ಗಂಭೀರ ಆತಂಕಕ್ಕೆ ಕಾರಣವಾಗಿದೆ.
ಡಿಸೆಂಬರ್ 1ರಂದು, ಯಮುನಾ ನದಿಯ ಮೇಲ್ಮೈಯಲ್ಲಿ ವಿಷಕಾರಿ ನೊರೆಯಂತಹ ದಟ್ಟವಾದ ಪದರವು ತೇಲುತ್ತಿರುವುದು ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.