ನವದೆಹಲಿ:ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿಗಾಗಿ ರಾಷ್ಟ್ರವ್ಯಾಪಿ ಅಭಿಯಾನಕ್ಕೆ ಕರ್ನಾಟಕದಲ್ಲಿ ಶುಕ್ರವಾರ ಚಾಲನೆ ನೀಡಲಾಗುವುದು ಎಂದು ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಮಂಗಳವಾರ ಹೇಳಿದ್ದಾರೆ.
ವಿಧಾನಸಭೆಗೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ರೈತರು ಬಿಜೆಪಿಯ ವಿರುದ್ಧ ಪ್ರಚಾರ ನಡೆಸಲಿದ್ದಾರೆ. ಇದೇ 12ರಂದು ಕೋಲ್ಕತ್ತದಲ್ಲಿ ನಡೆಯಲಿರುವ ರೈತರ ರ್ಯಾಲಿ ಮೂಲಕ ಈ ಪ್ರಚಾರ ಆರಂಭವಾಗಲಿದೆ ಎಂದು ರೈತ ನಾಯಕ ಬಲಬೀರ್ ಸಿಂಗ್ ರಾಜೇವಾಲ್ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಎಂಎಸ್ಪಿ ಅಭಿಯಾನವು ಕರ್ನಾಟಕದ ಬಳಿಕ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ನಡೆಯಲಿದೆ. ಕ್ರಮೇಣ ಇದು ಇಡೀ ದೇಶವನ್ನು ಆವರಿಸಲಿದೆ ಎಂದು ತಿಳಿಸಿದ್ದಾರೆ.
ಗಾಜಿಪುರ ಗಡಿ ಮತ್ತೆ ಬಂದ್:ಗಾಜಿಪುರ ಗಡಿಯಲ್ಲಿ ಮಂಗಳವಾರ ಬೆಳಿಗ್ಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟ ಕೆಲವೇಗಂಟೆಗಳಲ್ಲಿ ಪೊಲೀಸರು ಗಡಿಯನ್ನು ಪುನಃ ಮುಚ್ಚಿದರು. ಗಣರಾಜ್ಯೋತ್ಸವದ ದಿನ ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದರಿಂದ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.
6ರಂದು ಕರಾಳ ದಿನ:ರೈತರ ಪ್ರತಿಭಟನೆ ಆರಂಭವಾಗಿ ಶನಿವಾರಕ್ಕೆ (ಮಾರ್ಚ್ 6) ನೂರು ದಿನಗಳಾಗಲಿವೆ. ಅಂದು ಬೆಳಿಗ್ಗೆ 11ರಿಂದ ಸಂಜೆ 4ರವರೆಗೆ ಕುಂಡಲಿ–ಮನೇಸರ್–ಪಲ್ವಾಲ್ ಎಕ್ಸ್ಪ್ರೆಸ್ವೇಯನ್ನು ಬಂದ್ ಮಾಡಲಾಗುವುದು. ಆ ದಿನವನ್ನು ಕರಾಳ ದಿನ ಎಂದು ಆಚರಿಸಲಾಗುವುದು. ದೇಶದಾ
ದ್ಯಂತ ರೈತರು ಕಪ್ಪು ಧ್ವಜ ಹಾರಿಸಲಿದ್ದಾರೆ, ಕಪ್ಪು ಪಟ್ಟಿ ಮತ್ತು ಕಪ್ಪು ಬಟ್ಟೆ ಧರಿಸಲಿದ್ದಾರೆ. ಇದೇ 8ರಂದು ಮಹಿಳಾ ಕೃಷಿ ದಿನ ಆಚರಿಸಲಾಗುವುದು ಎಂದು ರೈತ ಮುಖಂಡರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.